ಸಾರಾಂಶ
ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆಯ ಅಂಗವಾಗಿ ಬೌದ್ಧಿಕ್ ನಡೆಯಿತು. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ. ರಾಜಾರಾಮ ಐತಾಳ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೋಟ
ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಸ್ಥಾನ ಸರ್ವ ಶ್ರೇಷ್ಠವಾದದ್ದು, ಆದ್ದರಿಂದ ಅವರಿಗೆ ಸದಾಕಾಲ ಗೌರವ ಸಲ್ಲಿಸಬೇಕು ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ. ರಾಜಾರಾಮ ಐತಾಳ್ ಹೇಳಿದರು.ಅವರು ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆಯ ಅಂಗವಾಗಿ ಹಮ್ಮಿಕೊಂಡ ಬೌದ್ಧಿಕ್ನಲ್ಲಿ ಮಾತನಾಡಿದರು.
ಶಿಕ್ಷಕರನ್ನು ಹೇಗೆ ಗುರುವಾಗಿ ಸ್ವೀಕರಿಸುತ್ತಿರಿ, ಅದೇ ರೀತಿ ಮಾತೃಪಿತೃರನ್ನು ಕೂಡ ಗುರುವಿನ ಸ್ಥಾನದಲ್ಲಿಯೇ ಕಾಣಬೇಕು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಸಮಾಜದಿಂದ ಸಂಸ್ಕಾರಭರಿತ ಶಿಕ್ಷಣದಿಂದ ವಂಚಿತರಾಗುವ ದಿನಗಳಲ್ಲಿ ನಾವಿದ್ದೇವೆ. ಈ ದಿಸೆಯಲ್ಲಿ ಗುರು ಪರಂಪರೆ ಕೂಡ ಅಳಿಯುತ್ತಿರುವುದು ಖೇದಕರ. ಆದ್ದರಿಂದ ಪೋಷಕರು ಮಕ್ಕಳಿಗೆ ಮನೆಯಲ್ಲಿಯೇ ಆರಂಭಿಕ ಕಾಲಘಟ್ಟದಲ್ಲಿ ಸಂಸ್ಕಾರಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಪ್ರಾಥಮಿಕ ಹಂತದ ಶಿಕ್ಷಣ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅದರ ತಳಹದಿಯನ್ನು ಗಟ್ಟಿಗೊಳಿಸಿ ಸುಸಂಸ್ಕೃತ ವಿದ್ಯಾರ್ಥಿಗಳನ್ನಾಗಿ ಮಾಡಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.ಪುಟಾಣಿಗಳು ಅಮೃತ ಬಿಂದು ಮತ್ತು ಅಮೃತ ಗುರುವಿನ ಬಗ್ಗೆ ವಚನಗಳನ್ನಾಡಿದರು. ಸೇವಾಸಂಗಮ ಶಿಶುಮಂದಿರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.