ಬಲಾತ್ಕಾರ, ಕೊಲೆ ಖಂಡಿಸಿ ಮೌನ ಪಂಜಿನ ಮೆರವಣಿಗೆ

| Published : Aug 17 2024, 12:55 AM IST

ಸಾರಾಂಶ

ವೈದ್ಯರು ತಮ್ಮ ಸೇವೆ ಸ್ಥಗಿತಗೊಳಿಸಿ, ಮೌನ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಿರಸಿ: ಕಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಬಲಾತ್ಕಾರ ಹಾಗೂ ಕೊಲೆಯ ಕ್ರೌರ್ಯವನ್ನು ಖಂಡಿಸಿ, ಇಲ್ಲಿನ ಭಾರತೀಯ ವೈದ್ಯಕೀಯ ಸಂಘದಿಂದ ಮೌನ ಪ್ರತಿಭಟನೆ ಹಾಗೂ ನಗರದಾದ್ಯಂತ ಪಂಜಿನ ಮೆರವಣಿ ನಡೆಸಲಾಯಿತು.

ನಗರದ ದೇವಿಕೆರೆ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಹಳೆ ಬಸ್ ನಿಲ್ದಾಣ ವೃತ್ತ, ಬಿಡ್ಕಿಬೈಲ್, ಸಿ.ಪಿ. ಬಜಾರ್, ಬಾರಕೂರ್ ಚೌಕ್ ಉಣ್ಣೆಮಠಗಲ್ಲಿ ಮೂಲಕ ದೇವಿಕೆರೆ ವೃತ್ತದ ಬಳಿ ಕೊನೆಗೊಂಡಿತು.

ವೈದ್ಯರು ತಮ್ಮ ಸೇವೆ ಸ್ಥಗಿತಗೊಳಿಸಿ, ಮೌನ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ, ಕಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಬಲಾತ್ಕಾರ ಹಾಗೂ ಕೊಲೆಯ ಕ್ರೌರ್ಯವನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೌನ ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮಧುಕೇಶ್ವರ. ಜಿ.ವಿ., ಕಾರ್ಯದರ್ಶಿ ಡಾ. ಸುಮನ ಹೆಗಡೆ, ವೈದ್ಯರಾದ ಡಾ. ದಿನೇಶ ಹೆಗಡೆ, ಡಾ. ಶಿವರಾಮ ಕೆ.ವಿ. ಸೇರಿದಂತೆ ನೂರಾರು ವೈದ್ಯರು, ಸ್ಕೊಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಆಸ್ಪತ್ರೆಯ ನರ್ಸ್‌ಗಳು, ಸ್ಕೊಡ್ ವೆಸ್ ಆರೋಗ್ಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಔಷಧ ವ್ಯಾಪಾರಸ್ಥರ ಸಂಘದಿಂದ ಬೆಂಬಲ

ಕಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಬಲಾತ್ಕಾರ ಹಾಗೂ ಕೊಲೆ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮೌನ ಪ್ರತಿಭಟನೆ ಹಾಗೂ ಪಂಜಿನ ಮೆರವಣಿಗೆಗೆ ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಪಾಲ್ಗೊಂಡು ಕೊಲೆ ಕೃತ್ಯದಲ್ಲಿ ಪಾಲ್ಗೊಂಡವರಿಗೆ ಸೂಕ್ತ ಶಿಕ್ಷೆಯಾಗಬೇಕು. ಸಮಾಜದಲ್ಲಿ ಇಂತಹ ಘಟನೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ವೈದ್ಯೆಯ ಮೇಲೆ ಅತ್ಯಾಚಾರ- ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಯಲ್ಲಾಪುರ: ಪಶ್ಚಿಮ ಬಂಗಾಳದ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ್ಲಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಭಾರತೀಯ ವೈದ್ಯ ಸಂಘ (ಐಎಂಎ) ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಬೆಂಬಲಿಸಿ, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಉತ್ತರ ಕನ್ನಡ ಜಿಲ್ಲಾ ಸಂಘದ ಕರೆಯ ಮೇರೆಗೆ ಯಲ್ಲಾಪುರದ ಸರ್ಕಾರಿ, ಖಾಸಗಿ, ಅಲೋಪತಿಕ್, ಆಯುರ್ವೇದ, ದಂತ ವೈದ್ಯರೆಲ್ಲರೂ ಕಪ್ಪುಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಯಲ್ಲಾಪುರ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೂ ಬೆಂಬಲವನ್ನು ಸೂಚಿಸಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.