ಪ್ರತಿ ತಾಲೂಕಿನಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ: ರಾಜೇಗೌಡ

| Published : Apr 30 2025, 12:31 AM IST

ಸಾರಾಂಶ

Silent protest in front of Gandhi statue against CM, DCM

-ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ನಿವೇಶನ

----

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪ್ರತಿ ತಾಲೂಕಿನಲ್ಲೂ ಸುಸಜ್ಜಿತ ಕಾಂಗ್ರೆಸ್ ಭವನ ಕಟ್ಟಬೇಕು ಎಂದು ಕೆಪಿಸಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಅವರು ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಅವರು ಕಾಂಗ್ರೆಸ್‌ ಕಚೇರಿಯ ಕಟ್ಟಡ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ ನಿವೇಶನವನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಅಂಶುಮಂತ್ ಅವರು ಕಾಂಗ್ರೆಸ್‌ ಪಕ್ಷದ ಕಚೇರಿ ಕಟ್ಟಡಕ್ಕೆ ನಿವೇಶನ ದಾನವಾಗಿ ನೀಡಿದ್ದಾರೆ. ಈ ಹಿಂದೆ ಅನೇಕರು ಕಾಂಗ್ರೆಸ್‌ ಪಕ್ಷದ ದೊಡ್ಡ ಹುದ್ದೆ ಅಲಂಕರಿಸಿದ್ದರೂ ಈ ರೀತಿಯಾಗಿ ದಾನ ನೀಡಿರಲಿಲ್ಲ. ಹಿಂದಿನಿಂದಲೂ ಮುಖಂಡರು ದಾನ ನೀಡುತ್ತಾ ಬಂದಿದ್ದರೆ ಎಲ್ಲಾ ತಾಲೂಕುಗಳಲ್ಲೂ ಕಾಂಗ್ರೆಸ್ ಭವನ ನಿರ್ಮಾಣವಾಗಿರುತ್ತಿತ್ತು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.

ಶೃಂಗೇರಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಿದ್ದು ಕಟ್ಟಡ ಉದ್ಘಾಟನೆಗೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಬಂದಿದ್ದರು. ಕೊಪ್ಪದಲ್ಲಿ ಲೀಜ್ ಮೇಲೆ ಕಟ್ಟಡ ಪಡೆದಿದ್ದು ಅಲ್ಲಿ ಕಾಂಗ್ರೆಸ್‌ ಕಚೇರಿ ನಡೆಸುತ್ತಿದ್ದೇವೆ. ಮುಂದೆ ನರಸಿಂಹರಾಜಪುರದಲ್ಲಿ ಕಾಂಗ್ರೆಸ್‌ ಕಚೇರಿ ಕಟ್ಟಡದ ಶಂಕು ಸ್ಥಾಪನೆಗೆ ಕೆಪಿಸಿಸಿ ಅಧ್ಯಕ್ಷರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ದಾನವಾಗಿ ನೀಡಿದ ನಿವೇಶನ ರಿಜಿಸ್ಟರ್ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಕಾರ್ಯಕರ್ತರ ಬೆವರ ಹನಿಯಿಂದ ಕಟ್ಟಿದ ಪಕ್ಷವಾಗಿದೆ. ಬಹಳ ವರ್ಷಗಳ ಹಿಂದೆ ಯಾವುದೇ ಸೌಲಭ್ಯ ಇಲ್ಲದ ದಿನಗಳಲ್ಲೂ ಕಾಂಗ್ರೆಸ್ ಪಕ್ಷದ ಹಿರಿಯರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಮನೆ ಕಟ್ಟಲು ಪ್ರತಿಯೊಬ್ಬ ಕಾರ್ಯಕರ್ತರ ಬೆಂಬಲ ಬೇಕಾಗಿದೆ. ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ,ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಎಲ್ಲರ ಸಹಕಾರ ಪಡೆದು ಕಾಂಗ್ರೆಸ್‌ ಮನೆಯನ್ನು ಕಟ್ಟಲಾಗಿದೆ. ಕಾಂಗ್ರೆಸ್ ಭವನ ಕಟ್ಟಲು ಜಿಲ್ಲೆಯ ಎಲ್ಲಾ ಗ್ರಾ.ಪಂ ಹಾಗೂ ಪಟ್ಟಣ ಪಂಚಾಯಿತಿ, ನಗರ ಸಭೆಗಳು ತಲಾ 25 ಸಾವಿರ ರುಪಾಯಿ ನೀಡಬೇಕು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಹ ತಮ್ಮ ಯಥಾನುಶಕ್ತಿಯಾಗಿ ದೇಣಿಗೆ ನೀಡಬೇಕು. 10 ರೂ. ನೀಡಿದರೂ ಗೌರವದಿಂದ ಸ್ವೀಕಾರ ಮಾಡಲಾಗುತ್ತದೆ. ಕಾಂಗ್ರೆಸ್‌ ಭವನ ಎಂಬುದು ಕಾಂಗ್ರೆಸ್‌ ಪಕ್ಷದ ಕುಟುಂಬದ ಮನೆ ಇದ್ದಂತೆ. ಡಿ.ಕೆ.ಶಿವಕುಮಾರ್ ಆಶಯದಂತೆ ಪ್ರತಿ ತಾಲೂಕಿನಲ್ಲೂ ಒಂದು ನಿವೇಶನ ಹೊಂದಬೇಕಾಗಿದೆ ಎಂದರು.

ಕೆಪಿಸಿಸಿ ಜನರಲ್ ಸೆಕ್ರಟರಿ ಕೆ.ವಿಜಯ ಸುಲವಂತ್ ಮಾತನಾಡಿ, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಭವನ ಕಟ್ಟಲಾಗುತ್ತದೆ. ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ ಅಧ್ಯಕ್ಷೆ ವಹಿಸಿದ್ದರು, ಕೆಪಿಸಿಸಿ ಕಾರ್ಯದರ್ಶಿ ಎಲ್.ನಾರಾಯಣ್‌, ಕೆಪಿಸಿಸಿ ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಸುಂದರೇಶ್, ಪ.ಪಂ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್‌.ಡಿ.ರಾಜೇಂದ್ರ, ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಹೋಬಳಿ ಅದ್ಯಕ್ಷ ಬೆನ್ನಿ, ತಾ.ಪ್ರ.ಕಾ ಸುನೀಲ್ ಕುಮಾರ್, ಪ.ಪಂ ಉಪಾಧ್ಯಕ್ಷೆ ಉಮಾ, ಸದಸ್ಯರಾದ ಸುರೈಯಾಭಾನು, ವಾಸಿಂ, ಮನೋಹರ್ ಪಾಷ, ಕೆಡಿಪಿ ಸದಸ್ಯ ಕೆ.ವಿ.ರಾಜು, ಮುಖಂಡರಾದ ದೇವಂತರಾಜ್, ನಂದೀಶ್ ಮಂಜಪ್ಪಗೌಡ, ಎಂ.ಆರ್.ರವಿಶಂಕರ್ ಇದ್ದರು. ನಿವೇಶನ ದಾನ ನೀಡಿದ ಡಾ.ಕೆ.ಪಿ.ಅಂಶುಮಂತ್ ಅವರನ್ನು ಅಭಿನಂದಿಸಲಾಯಿತು.