ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಮಗ್ರ ಅಭಿವೃದ್ಧಿಯೊಂದಿಗೆ ಕ್ಷೇತ್ರದ ಮತದಾರರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಮಾದಹಳ್ಳಿ ಯುವಕರ ಬಳಗ, ಪಿ.ಎಂ.ನರೇಂದ್ರಸ್ವಾಮಿ ಅಭಿಮಾನಿಗಳ ಬಳಗ ಹಾಗೂ ತಳಗವಾದಿ, ದುಗ್ಗನಹಳ್ಳಿ ಗ್ರಾಪಂ ಆಶ್ರಯದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರದ ಜವಾಬ್ದಾರಿಯಲ್ಲಿ ಈಗಾಗಲೇ ಹಲವು ಯೋಜನೆ ತಂದು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇಂದಿನಿಂದಲೇ ನಾಲಾ ಆಧುನೀಕರಣ, ರಸ್ತೆಗಳು, ವಿದ್ಯಾರ್ಥಿ ನಿಲಯ ಯೋಜನೆಗಳಿಗೆ ಗುದ್ದಲಿ ಪೂಜೆ ನೆರೆವೇರಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ಬರಗಾಲದಿಂದ ನೀರು, ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು ಸಹಜ. ನೀರನ್ನು ಮಿತವಾಗಿ ಬಳಸಿ ಜೊತೆಗೆ ಹಂಚಿಕೊಂಡು ಬದುಕುವ ಹವ್ಯಾಸ ರೂಢಿಸಿಕೊಳ್ಳಬೇಕು. ರಣ ಬಿಸಿಲಿನಿಂದ ಅಲ್ಲಲ್ಲಿ ಹುಲ್ಲಿನ ಮೆದೆಗಳು ಕೂಡ ಬೆಂಕಿಗೆ ಆಹುತಿಯಾಗುತ್ತಿವೆ. ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ. ಈ ಬಗ್ಗೆ ಜಾಗೃತ ರಾಗಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜನೆಯಿಂದ ಕ್ರೀಡೆ ಉತ್ತೇಜಿಸುವ ಜೊತೆಗೆ ಮನರಂಜನೆಗೆ ಸಹಕಾರಿಯಾಗಿದೆ. ನಾನು ಕೂಡ ಕಬಡ್ಡಿ ಆಟಗಾರನಾಗಿದ್ದೇನೆ. ಪಂದ್ಯಾವಳಿಯಲ್ಲಿ ಭಾಗವಹಿಸುವುದು ಖುಷಿ ತಂದಿದೆ ಎಂದರು.ಮುಂದಿನ ದಿನಗಳಲ್ಲಿ ಕಬಡ್ಡಿ ಆಟಕ್ಕೆ ಅನುಕೂಲವಾಗುವಂತೆ ಮ್ಯಾಟ್, ಸಮವಸ್ತ್ರ ವಿತರಿಸಲಾಗುವುದು. ಇನ್ನೂ ಹೆಚ್ಚಿನ ತಂಡಗಳು ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ ಬೀದರಕೋಟೆ, ದ್ವಿತೀಯ ಬಹುಮಾನ ಮಾದಹಳ್ಳಿ, 3ನೇ ಬಹುಮಾನ ಮಂಡ್ಯ- ಸಾತನೂರು, 4ನೇ ಬಹುಮಾನವನ್ನು ದೊಡ್ಡ ಅರಸಿನಕೆರೆ ತಂಡಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.ಇದೇ ವೇಳೆ ಗ್ರಾಪಂ ಅಧ್ಯಕ್ಷ ಗೊಂವಿಂದರಾಜು, ತಳಗವಾದಿ ಗ್ರಾಪಂ ಉಪಾಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಮುಖಂಡರಾದ ವಿಶ್ವಾಸ್, ಮುತ್ತುರಾಜ್, ದಿಲೀಪ್ಕುಮಾರ್ (ವಿಶ್ವ), ಕೆ.ಸಿ ಚೌಡೇಗೌಡ, ದ್ಯಾಪೇಗೌಡ, ಶಾಂತರಾಜು, ಮಹೇಶ್, ಸತೀಶ್ ಸೇರಿದಂತೆ ಕ್ರೀಡಾ ಆಯೋಜಕರು ಇದ್ದರು.