ಹಗರಿಬೊಮ್ಮನಹಳ್ಳಿ: ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ, ಆ ಮೂಲಕ ಅವರನ್ನು ಸೌಲಭ್ಯಗಳಿಂದ ವಂಚಿತಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ಮತದಾರರನ್ನು ಎಚ್ಚರಿಸುವ ಜೊತೆಗೆ ಗೊಂದಲಗಳಿದ್ದರೆ ಸರಿಪಡಿಸಿ ಎಂದು ಮಾಜಿ ಶಾಸಕ ಭೀಮಾನಾಯ್ಕ ಸೂಚಿಸಿದರು.
ಪಟ್ಟಣದ ಅಶೋಕ ಫಾರ್ಮ್ ಹೌಸ್ನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಕ್ಷೇತ್ರ ವ್ಯಾಪ್ತಿಯ ಬಿ.ಎಲ್.ಎ೧ ಹಾಗೂ ಬಿ.ಎಲ್.ಎ೨ಗಳಿಗಾಗಿ ಬ್ಲಾಕ್ ಕಾಂಗ್ರೆಸ್ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೆಸರನ್ನು ಕೈಬಿಡುವ ಆಟ ನಡೆಯುವುದಿಲ್ಲ. ಮತದಾರ ಪಟ್ಟಿಯ ಪರಿಷ್ಕರಣೆ ಬಿಜೆಪಿಯು ಮುಂದುವರೆಸುತ್ತಿರುವ ಚುನಾವಣಾ ಕುತಂತ್ರದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಪ್ರತಿ ಮತಗಟ್ಟೆಗಳ ಕಾಂಗ್ರೆಸ್ ಏಜೆಂಟರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಾವ ಮತದಾರನ ಹೆಸರು ಪಟ್ಟಿಯಿಂದ ನಾಪತ್ತೆಯಾಗದಂತೆ ನಿಗಾ ವಹಿಸಬೇಕು. ಮತಪಟ್ಟಿ ಪರಿಷ್ಕರಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ನೇಮಿಸಲಾಗಿರುವ ಕಾರ್ಯಕರ್ತರ ಹೆಸರನ್ನು ದೂರವಾಣಿ ಸಂಖ್ಯೆಯ ಮೂಲಕ ಭಾವಚಿತ್ರದ ಫ್ಲೆಕ್ಸ್ ಅಳವಡಿಸಲಾಗುತ್ತದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಂಡು ಪರಿಷ್ಕರಣೆಯಲ್ಲಿ ಭಾಗವಹಿಸಬೇಕು ಎಂದರು.
ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಉಪಾಧ್ಯಕ್ಷ ಜಂದೀಸಾಬ್, ಸದಸ್ಯ ಹೆಗ್ಡಾಳು ಪರಶುರಾಮ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಾ.ಸಾಹಿರಾಬಾನು, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ಪುರಸಭೆ ಮಾಜಿ ಅಧ್ಯಕ್ಷ ಮರಿರಾಮಣ್ಣ, ಸದಸ್ಯ ಪವಾಡಿ ಹನಮಂತಪ್ಪ, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಡಿಶ್ ಮಂಜುನಾಥ್, ಚಿಂತ್ರಪಳ್ಳಿ ದೇವೇಂದ್ರಪ್ಪ, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೇಶ್, ಮತಗಟ್ಟೆ ಏಜೆಂಟರಾದ ರೋಗಾಣಿ ಪ್ರಕಾಶ್, ಪಟ್ಟಣಶೆಟ್ಟಿ ಸುರೇಶ್, ಗಜೇಂದ್ರ, ಕಾರ್ಯಕರ್ತರು ಇದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಶಾಸಕ ಭೀಮಾನಾಯ್ಕ ಬೂತ್ ಮಟ್ಟದ ಕಾರ್ಯಕರ್ತರಿಗೆ ಮತಗಟ್ಟೆ ಕೇಂದ್ರಗಳಲ್ಲಿ ಅಳವಡಿಸಲು ಬ್ಯಾನರ್ ವಿತರಿಸಿದರು.