ಹುಬ್ಬಳ್ಳಿ:

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ನಡೆದ ಮಹಾರಾಜಾ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯದಲ್ಲಿ ರಿತೀಶ ಭಟ್ಕಳ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನೊಂದಿಗೆ ಮೈಸೂರು ವಾರಿಯರ್ಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ತಂಡದ ಪರ ತಿಪ್ಪಾ ರೆಡ್ಡಿ (51), ಧ್ರುವ ಪ್ರಭಾಕರ (51) ರನ್ ಗಳಿಸಿ ಆಸರೆಯಾದರೆ, ನಾಯಕ ಮನೀಶ್ ಪಾಂಡೆ (ಅಜೇಯ 41) ರನ್‌ಗಳ ಕೊಡುಗೆ ನೀಡಿದರು.

ಮೈಸೂರು ವಾರಿಯರ್ಸ್ ಪರ ಲವೀಶ್ ಕುಶಾಲ್ 25 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅರಬಿಂದ್ ಕುಮಾರ 31 ರನ್ ನೀಡಿ 3 ವಿಕೆಟ್ ಪಡೆದರು.

197 ರನ್‌ಗಳ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ 19.3 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಿತೀಶ್ ಭಟ್ಕಳ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 75 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಅವರಿಗೆ ಲಂಕೇಶ (29), ಮನೋಜ ಭಾಂಡಗೆ (24) ಹಾಗೂ ಎಲ್.ಆರ್. ಚೇತನ್ (23) ಉತ್ತಮ ಸಾಥ್ ನೀಡಿದರು. ಗುಲ್ಬರ್ಗಾ ಮಿಸ್ಟಿಕ್ಸ್ ಪರ ನಿತಿನ್ ಡಿ ಮೆಲ್ಲೋ 38 ರನ್ ನೀಡಿ 3 ವಿಕೆಟ್ ಪಡೆದದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡ 3 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 7 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್‌ 6 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.


ಪಂದ್ಯ ವೀಕ್ಷಿಸಿದ ನಾಯಕರು...

ಮೈಸೂರು ವಾರಿಯರ್ಸ್-ಗುಲ್ಬರ್ಗಾ ಮಿಸ್ಟಿಕ್ಸ್ ನಡುವಿನ ಪಂದ್ಯವನ್ನು ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಯೂರ ಮೋರೆ, ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ ಕಿತ್ತೂರ, ವಲಯ ಸಂಚಾಲಕ ವೀರಣ್ಣ ಸವಡಿ ಸೇರಿದಂತೆ ಹಲವರು ವೀಕ್ಷಿಸಿದರು.ಸಂಕ್ಷಿಪ್ತ ಸ್ಕೋರ್:

ಗುಲ್ಬರ್ಗಾ ಮಿಸ್ಟಿಕ್ಸ್:

20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 (ಮ್ಯಾಕ್‌ನೀಲ್ 27, ಧ್ರುವ್ 51, ತಿಪ್ಪಾ ರೆಡ್ಡಿ 51, ಮನೀಷ್ ಪಾಂಡೆ 41*; ಅರಬಿಂದ್ ರೈ 3/31, ಲವಿಶ್ ಕೌಶಲ್ 3/25)

ಮೈಸೂರು ವಾರಿಯರ್ಸ್:

19.3 ಓವರ್‌ಗಳಲ್ಲಿ 7 ವಿಕೆಟ್‌ಗೆ 197 (ಎಲ್.ಆರ್. ಚೇತನ್ 23, ರಿತೇಶ್ 75*, ಲಂಕೇಶ್ ಕೆ.ಪಿ. 29, ಮನೋಜ್ ಭಾಂಡಗೆ 24; ನಾಥನ್ ಡಿ''''''''ಮೆಲ್ಲೊ 3/38, ಪರಾಸ್ 2/24, ರೋನಿತ್ 2/41).