ಎಸ್.ಆರ್.ಕೆ. ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಯನ್ನು ಶನಿವಾರ ಸಂಜೆ ಬೆಂಗಳೂರಿನ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

ಪುತ್ತೂರು: ಎಸ್.ಆರ್.ಕೆ. ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಯನ್ನು ಶನಿವಾರ ಸಂಜೆ ಬೆಂಗಳೂರಿನ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಸೀಠಾಧ್ಯಕ್ಷ ಡಾ. ಶ್ರೀ ನಿರ್ಮದಾನಂದನಾಥ ಸ್ವಾಮೀಜಿ, ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕೇಶವ ಅಮೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.ರಾಜ್ಯಪಾಲ ಥಾವರಚಂದ್ ಗೆಹಲೋತ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಕೃಷ್ಣಗೌಡ, ಪದ್ಮಶ್ರೀ ಪುರಸ್ಕೃತ ಡಾ,ಪ್ರಶಾಂತ್ ಪ್ರಕಾಶ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕೇಶವ ಅಮೈ ಅವರ ಪತ್ನಿ ಮಾಲತಿ, ಪುತ್ರ ಗಗನ್ ಅಲ್ಲದೆ ಕೇಶವ ಅಮೈ ಅವರ ಆಪ್ತರು ಈ ಸಂದರ್ಭ ಜೊತೆಯಲ್ಲಿದ್ದರು. ಪ್ರಶಸ್ತಿಯು ೩ ಗ್ರಾಂ ಬೆಳ್ಳಿಯ ಪದಕ, ೨೫ ಸಾವಿರ ರು. ಚೆಕ್ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿತ್ತು.ಕೇಶವ ಅಮೈ ಅವರು ಕೃಷಿಕರ ಅನುಕೂಲಕ್ಕಾಗಿ ಹಗುರವಾದ ಏಣಿ ತಯಾರಿಕೆಯ ಮೂಲಕ ಕೃಷಿಕರ ಮಿತ್ರರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಕರಿಮೆಣಸು ಬೇರ್ಪಡಿಸುವಿಕೆ, ಅಡಿಕೆ ಗೊನೆ ಬೇರ್ಪಡಿಸುವ ಯಂತ್ರಗಳ ಸಂಶೋಧನೆಯಲ್ಲಿಯೂ ಅವರು ಯಶಸ್ಸುಕಂಡಿದ್ದರು. ಇದರ ಜೊತೆಗೆ ತೋಟದೊಳಗೆ ಸಾಗಾಟಕ್ಕೆ ಅನುಕೂಲಕರ ವಾಹನ ಸಹಿತ ಕೃಷಿಕ್ಷೇತ್ರಕ್ಕಾಗಿ ನಾನಾ ಉಪಕರಣ ಸಾಧನ ಆವಿಷ್ಕರಿಸಿದ್ದಾರೆ. ಕೃಷಿಕರಿಗೆ ಅಗತ್ಯವಾಗುವ ಸಾಧನಗಳಿಗಾಗಿ ನಿರಂತರ ಸಂಶೋಧನೆ ಮಾಡುತ್ತಿರುವುದನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.