ಸಾರಾಂಶ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ತನ್ನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ಶಿಕ್ಷಣವನ್ನು ನೀಡುವುದಕ್ಕಾಗಿ ಮಣಿಪಾಲದ ಡಾ.ಟಿ.ಎಂ.ಪೈ ಫೌಂಡೇಶನ್ನ ಅಂಗ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (ಎಂಎಸ್ಡಿಸಿ)ನೊಂದಿಗೆ ಒಡಂಬಡಿಕೆ (ಎಂ.ಓ.ಯು) ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ತನ್ನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ಶಿಕ್ಷಣವನ್ನು ನೀಡುವುದಕ್ಕಾಗಿ ಮಣಿಪಾಲದ ಡಾ.ಟಿ.ಎಂ.ಪೈ ಫೌಂಡೇಶನ್ನ ಅಂಗ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (ಎಂಎಸ್ಡಿಸಿ)ನೊಂದಿಗೆ ಒಡಂಬಡಿಕೆ (ಎಂ.ಓ.ಯು) ಮಾಡಿಕೊಂಡಿದೆ.ಕೌಶಲ್ಯಾಧಾರಿತ ಕೋರ್ಸುಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಶಲವನ್ನು ವೃದ್ಧಿಸುವುದು, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರಗಳು, ಕೈಗಾರಿಕಾ ಭೇಟಿ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಮತ್ತು ಪದವಿ ಜೊತೆಗೆ ಕೌಶಲ ಕೋರ್ಸುಗಳ ಶಿಕ್ಷಣವನ್ನು ನೀಡುವುದು ಈ ಒಡಂಬಡಿಕೆಯ ಉದ್ದೇಶಗಳಾಗಿವೆ.ಈ ಸಂದರ್ಭ ಎಂಎಸ್ಡಿಸಿ ಚೇರ್ಮನ್ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ, ಪದವಿ ಜೊತೆಗೆ ಉದ್ಯೋಗ ಕೌಶಲ್ಯಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತೀರಾ ಅಗತ್ಯ. ಭಾಷೆ ಕೌಶಲ್ಯ, ಸಂವಹನ, ಕಂಪ್ಯೂಟರ್ ಪರಿಣತಿ, ವೃತ್ತಿ ಕೌಶಲ್ಯಗಳು, ನಾಯಕತ್ವ ಕಲೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ತಯಾರಿ ಮತ್ತು ಜ್ಞಾನ, ಸ್ವಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್ಗಳಾದ ಸಿಎನ್ಸಿ ಮಶಿನ್ಸ್, ಕ್ಯಾಡ್ ಸೆಂಟರ್, ಫ್ಯಾಶನ್ ಡಿಸೈನ್, ರೊಬೊಟಿಕ್ಸ್, ತ್ರಿಡಿ, ಅನಿಮೇಷನ್ ಟೆಕ್ನಾಲಜಿ, ಆಟೊ ಮೋಟಿವ್ ಸರ್ವೀಸ್, ಇಂಟೀರಿಯರ್ ಡಿಸೈನ್, ಫರ್ನೀಚರ್ ಆ್ಯಂಡ್ ಪಿಕ್ಚರ್ಸ್, ಆಟೋಮೇಶನ್, ಎಐ, ಎಂ.ಎಲ್., ಸೈಬರ್ ಸೆಕ್ಯೂರಿಟಿ, ಇವಿ ಟೆಕ್ನಾಲಜಿ, ಬ್ಯೂಟಿ ಆ್ಯಂಡ್ ವೆಲ್ನೆಸ್ ಮುಂತಾದವುಗಳು ಅವಶ್ಯಕವಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿ, ಕಾಲೇಜಿನಲ್ಲಿ ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್ ಸರ್ವಿಸಸ್ ವಲಯಗಳಲ್ಲಿ ಉದ್ಯೋಗಗಿಟ್ಟಿಸಲು ಹೊಸ ಬಿ.ಕಾಂ. ಕೋರ್ಸ್ - ಎ.ಇ.ಡಿ.ಪಿ.ಯನ್ನು ಈ ವರ್ಷ ಪ್ರಾರಂಭಿಸಿದ್ದು, ಕಲಿಕೆಯ ಜೊತೆಗೆ ಗಳಿಕೆಯನ್ನು ಮಾಡಲು ಅಪ್ರೆಂಟೈಸ್ಶಿಪ್ನ ಅವಕಾಶ ಕಲ್ಪಿಸಲಾಗಿದೆ ಎಂದರು.ಎಂಎಸ್ಡಿಸಿ ಕುಲಸಚಿವ ಡಾ. ಅಂಜಯ್ಯ ದೇವಿನೇನಿ, ಪ್ರವೇಶ ಮತ್ತು ಸಂಪರ್ಕಾಧಿಕಾರಿ ಡಾ. ನಾರಾಯಣ ಶೆಣೈ ಕೆ., ತೆಂಕನಿಡಿಯೂರು ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ಎನ್., ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ದಿನೇಶ್ ಎಂ. ಮತ್ತು ಎಂಎಸ್ಡಿಸಿಯ ಅನುಷ ಎರಡು ಸಂಸ್ಥೆಗಳ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.