ಸಾರಾಂಶ
ರಾಮನಗರ: ಇಂದಿನ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕ - ಯುವತಿಯರನ್ನು ಯಶಸ್ವಿಗೊಳಿಸಲು ಕೌಶಲ್ಯ ಶಿಕ್ಷಣ ಅತ್ಯಗತ್ಯ ಎಂದು ಸಾಹಿತಿ ಪ್ರೊ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಎಕ್ಸ್ ಪರ್ಟ್ ಸಮಾಗಮ - 2025 ಕಾರ್ಯಕ್ರಮ ಉದ್ಘಾಟಿಸಿದ ಅವರು, ಕೌಶಲ್ಯ ಶಿಕ್ಷಣವು ಕೇವಲ ಸೈದ್ಧಾಂತಿಕ ಜ್ಞಾನವನ್ನು ನೀಡುವುದಲ್ಲದೆ ಕೆಲಸದ ಸ್ಥಳಗಳಲ್ಲಿ ಯಶಸ್ವಿಯಾಗಲು ಬೇಕಾದ ಪ್ರಾಯೋಗಿಕ ಕೌಶಲ್ಯಗಳನ್ನು ನೀಡುತ್ತದೆ ಎಂದರು.ಮಕ್ಕಳಿಗೆ ಜ್ಞಾನದ ಜೊತೆಗೆ ಕೌಶಲ್ಯ ಮತ್ತು ಮೌಲ್ಯವನ್ನು ಕಲಿಸುವ ಕೆಲಸವನ್ನು ಮಾಡಬೇಕಾಗಿದೆ. ವಿದ್ಯಾರ್ಥಿಗಳನ್ನು ಸಶಕ್ತವಾಗಿ ಮುಂದಿನ ಬದುಕಿಗೆ ಸಿದ್ದಗೊಳಿಸುವುದೇ ಶಿಕ್ಷಣದ ಕೆಲಸ. ಅದು ಸರಿಯಾದ ಜ್ಞಾನದಿಂದ ಮಾತ್ರ ಸಾಧ್ಯವಾಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆ ದೃಷ್ಟಿಯಿಂದ ಕೌಶಲ್ಯ ಶಿಕ್ಷಣ ಮುಖ್ಯವಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಬೆಂಗಳೂರು ಸರ್ಕಾರಿ ಶಾಲಾ ಕಾಲೇಜು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಜಿ.ನಾರಾಯಣ್ ಮಾತನಾಡಿ, ಸಮಾಜ ಸುಧಾರಣೆಗಾಗಿ ಹೋರಾಡಿದ ಬುದ್ಧ , ಬಸವಣ್ಣ, ಅಂಬೇಡ್ಕರ್ ಅವರಂತಹ ದಾರ್ಶನಿಕರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅಷ್ಟೇ ಅಲ್ಲದೆ, ಸಮಾಜದಲ್ಲಿ ಜೀವಂತವಾಗಿರುವ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಪ್ರತಿಯೊಬ್ಬ ಮನುಷ್ಯನಿಗೂ ಶಿಕ್ಷಣ ವಿನಯ ಕಲಿಸುತ್ತದೆ. ಜೊತೆಗೆ ಉತ್ತಮ ಪ್ರಜೆಯನ್ನಾಗಿ ಹಾಗೂ ವಿಶ್ವ ಮಾನವನನ್ನಾಗಿ ರೂಪಿಸುತ್ತದೆ. ಪದವೀಧರರಾದ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ಬದುಕು ಕಟ್ಟಿಕೊಡುವ ಶಿಕ್ಷಣ ಬೇಕಾಗಿದೆ. ಉದ್ಯೋಗ ಸಿಗಲ್ಲ, ಯಶಸ್ವಿ ಆಗುವುದಿಲ್ಲ ಎಂಬ ವಿದ್ಯಾರ್ಥಿಗಳಲ್ಲಿ ಎಂದಿಗೂ ಭಾವನೆ ಬರಬಾರದು ಎಂದರು.
ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉನ್ನತ ಸ್ಥಾನದಲ್ಲಿ ನೋಡುವ ಕನಸು ಕಾಣುತ್ತಾರೆ. ಆದ್ದರಿಂದ ವಿದ್ಯಾರ್ಥಿ ವಯಸ್ಸಿನಲ್ಲಿ ತಮ್ಮ ಮನಸ್ಸನ್ನು ಬೇರೆಯವರ ಸೇಳೆತಕ್ಕೆ ನೀಡಿದರೆ ಕಷ್ಟದ ಜೀವನ ಎದುರಿಸಬೇಕಾಗುತ್ತದೆ. ಇದು ಸ್ಪಾರ್ಧಾತ್ಮಕ ಜಗತ್ತಾಗಿರುವ ಕಾರಣ ಶ್ರದ್ಧೆಯಿಂದ ವ್ಯಾಸಂಗ ಮಾಡಿ ಎಲ್ಲ ಸ್ಪರ್ಧೆಗಳಿಗೂ ಅಣಿಯಾಗಬೇಕು ಎಂದು ನಾರಾಯಣ್ ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಆರ್.ರವಿಕುಮಾರ್, ಎಕ್ಸ್ ಪರ್ಟ್ ಕಾಲೇಜು ಶುಲ್ಕಕ್ಕಾಗಿ ಆಸೆ ಪಡೆದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಆಮೂಲಕ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಹೊತ್ತಿದೆ. ಇದಕ್ಕಾಗಿ ಉಪನ್ಯಾಸಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ಪ್ರೊ.ಕೆ.ವೈ.ನಾರಾಯಣಸ್ವಾಮಿರವರ ಸಲಹೆಯಂತೆ ಮುಂದಿನ ವರ್ಷದಿಂದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ದೇಸಿ ಉಡುಗೆಯನ್ನು ಕಡ್ಡಾಯಗೊಳಿಸಲಾಗುವುದು. ಸದ್ಯಕ್ಕೆ ಕಾಲೇಜಿನಲ್ಲಿ 800 ಇರುವ ವಿದ್ಯಾರ್ತಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು.2023-24ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. 2024-25ನೇ ಸಾಲಿನ ವಿದ್ಯಾರ್ತಿಗಳಿಗೆ ಬೀಳ್ಕೊಡುಗೆ ನೀಡಿದರೆ, 2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.
ವಿಶ್ರಾಂತ ಹತೋಟಿಗಾರರಾದ ಡಿ.ಎಂ.ಸತ್ಯನಾರಾಯಣ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚುಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾಲೇಜಿನ ಉಪ ಪ್ರಾಂಶುಪಾಲ ಆರ್.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಗೇಂದ್ರ, ಮುಖ್ಯ ಶೈಕ್ಷಣಿಕ ಸಲಹೆಗಾರ ಎಂ.ಸಿ.ಕಿರಣ್ ಕುಮಾರ್, ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
22ಕೆಆರ್ ಎಂಎನ್ 5.ಜೆಪಿಜಿರಾಮನಗರದ ಅಂಬೇಡ್ಕರ್ ಭವನದಲ್ಲಿ ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಎಕ್ಸ್ ಪರ್ಟ್ ಸಮಾಗಮ - 2025 ಕಾರ್ಯಕ್ರಮದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಇರುವುದು.