ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಧುನಿಕ ತಂತ್ರಜ್ಞಾನದ ಯುಗದಲ್ಲಿರುವ ಯುವ ಸಮೂಹವು ಉದ್ಯೋಗ ಪಡೆಯಲು ಕೌಶಲ್ಯಯುಕ್ತ ಶಿಕ್ಷಣ ಪೂರಕವಾಗುತ್ತದೆ ಎಂದು ಬೆಂಗಳೂರಿನ ಫಾಕ್ಸ್ಕಾನ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಸುಹಾಸ್ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಕೋಶ ಮತ್ತು ಬೆಂಗಳೂರಿನ ಫಾಕ್ಸ್ಕಾನ್ ಮತ್ತು ಮಾಗ್ನೆಸ್ ಇಂಟರನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಸಸಿಗೆ ನೀರುಣಿಸಿ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದರಿಂದ ಸಮಾಜದಲ್ಲಿ ಆದರ್ಶವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಮಾತನಾಡಿ, ಉದ್ಯೋಗ ಕೋಶದ ಸಂಚಾಲಕ ಪ್ರೊ.ಶಿವಶಂಕರ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದರಿಂದ ತಂದೆ, ತಾಯಿ, ಕುಂಟುಂಬಕ್ಕೆ ಆರ್ಥಿಕ ಭದ್ರತೆ ದೊರೆಯುವ ಮೂಲಕ ಅವರ ಘನತೆ ಮತ್ತು ಕೀರ್ತಿ ತರುವಂತ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದರು.

ಪ್ರೊ.ಕೆಂಧೂಳಿ ಪ್ರಾರ್ಥನೆ ಮಾಡಿದರು. ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ ಬೀಳಗಿ ಸ್ವಾಗತಿಸಿದರು, ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಸಿಎ ಪದವಿಯ ಸುಮಾರು 485 ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ ಮೊದಲ ಹಂತದಲ್ಲಿ 180 ಜನ ವಿದ್ಯಾರ್ಥಿಗಳು ಆಯ್ಕೆಯಾಗಿ ಉದ್ಯೋಗ ನೇಮಕಾತಿ ಪತ್ರ ಪಡೆದರು.


ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಗಳು ಸ್ವಾವಲಂಭಿಯಾಗಿ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಲು ಉದ್ಯೋಗದ ಭದ್ರತೆ ಮುಖ್ಯವಾಗಿದೆ. ನಮ್ಮ ಕಾಲೇಜಿನಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಉದ್ಯೋಗವನ್ನು ಕೊಡಿಸುವ ಕಾರ್ಯವನ್ನು ಮಾಡುತ್ತಿದೆ. ತಮಗೆ ದೊರೆತಿರುವ ಉದ್ಯೋಗದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ದಕ್ಷತೆ ಮತ್ತು ಆಸಕ್ತಿಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯವಿದೆ.

-ಸುಹಾಸ್, ಮಾನವ ಸಂಪನ್ಮೂಲ ಅಧಿಕಾರಿ, ಫಾಕ್ಸ್ಕಾನ್ ಕಂಪನಿ, ಬೆಂಗಳೂರು