ಸಾರಾಂಶ
ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು ಅಂಬೇಡ್ಕರ್ ಗೆ ಅಪಮಾನ ಮಾಡಿರುವ ವ್ಯಕ್ತಿ ಕೇಂದ್ರದಲ್ಲಿ ಸಚಿವರಾಗಿರಲು ಯೋಗ್ಯವಲ್ಲ
ಗದಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದು ಸಂವಿಧಾನ ವಿರೋಧಿಯಾಗಿದೆ, ಅಮಿತ್ ಶಾರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಗಡಿಪಾರ ಮಾಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಗುರುವಾರ ಗದಗ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಮಾತನಾಡಿ, ಅಂಬೇಡ್ಕರ್ ಹಲವು ಧರ್ಮ, ಭಾಷೆ, ಸಂಸ್ಕ್ರತಿ, ಜಾತಿ ಹಾಗೂ ಸಂಪ್ರದಾಯಗಳನ್ನು ಒಳಗೊಂಡಿರುವ ಭಾರತದಂತಹ ದೇಶವನ್ನು ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು, ಯಾವುದೇ ಧರ್ಮ, ಜಾತಿ ಪರಿಗಣಿಸದೆ ಎಲ್ಲ ಭಾರತೀಯರ ಬದುಕಿನ ಘನತೆ ಹೆಚ್ಚಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟವರು, ಆದರೆ ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು ಅಂಬೇಡ್ಕರ್ ಗೆ ಅಪಮಾನ ಮಾಡಿರುವ ವ್ಯಕ್ತಿ ಕೇಂದ್ರದಲ್ಲಿ ಸಚಿವರಾಗಿರಲು ಯೋಗ್ಯವಲ್ಲ, ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಮಾನ್ವಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಸಮಾನತೆ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು, ಈ ದೇಶದಲ್ಲಿ ಇದ್ದ ಶ್ರೇಣೀಕೃತ ವ್ಯವಸ್ಥೆ ಹೋಗಲಾಡಿಸಿ ಸಮಾನ ಹಕ್ಕು ನೀಡಿದವರು, ನಮ್ಮ ದೇಶದ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದವರು, ಅಂತಹ ಮಹಾನನಾಯಕನ ಬಗ್ಗೆ ಮಾತನಾಡುವ ಮೂಲಕ ಸಂವಿಧಾನ ವಿರೋಧಿ ಅಮಿತ್ ಶಾ ಈ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದರು.
ಪ್ರಗತಿಪರ ಚಿಂತಕ ಬಸವರಾಜ ಪೂಜಾರ, ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ್ ಇಸ್ಮಾಯಿಲನವರ, ಮುನ್ನಾ ಅಗಡಿ, ಖಾಜಾಸಾಬ ಬಳ್ಳಾರಿ, ಶಂಕ್ರಪ್ಪ ಪೂಜಾರ, ಜಂದಿಸಾಬ್ ಬಳ್ಳಾರಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.