ಸಾರಾಂಶ
ನನ್ನ ಈ ಅವಧಿಯಲ್ಲಿ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ನನ್ನ ಈ ಅವಧಿಯಲ್ಲಿ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಯು. ಬಿ. ಬಣಕಾರ ಭರವಸೆ ನೀಡಿದರು.ತಾಲೂಕಿನ ನಿಡನೇಗಿಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಮಾಟ್೯ಕ್ಲಾಸ್ ಹಾಗೂ ಋತುಮಾನ ಶಾಲೆ ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಹಾಗೂ ಕೆಲಸ ಅರಸಿ ವಲಸೆ ಹೋಗುವ ಪಾಲಕರ ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಆಗಬಾರದು ಎಂಬುದು ಋತುಮಾನ ಕೇಂದ್ರದ ಉದ್ಧೇಶವಾಗಿದೆ. ಈ ಕೇಂದ್ರದ ಸದುಪಯೋಗವನ್ನು ಶಾಲಾ ಮಕ್ಕಳು ಪಡೆಯಬೇಕು ಎಂದರು. ಶಾಲಾ ಕೊಠಡಿ ನಿರ್ಮಾಣ, ಪ್ರೌಢಶಾಲೆ ಮಂಜೂರು ಕುರಿತು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಶಾಲಾ ಆಡಳಿತ ಮಂಡಳಿಯವರು ಮನವಿ ಸಲ್ಲಿಸಿದ್ದು ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್. ಮಾತನಾಡಿ, ಆಧುನಿಕ ಶಿಕ್ಷಣದ ಅಗತ್ಯೆಗೆ ಸ್ಟಾಟ್೯ಕ್ಲಾಸ್ ಅವಶ್ಯಕವಿದೆ. ಋತುಮಾನ ಶಾಲೆಯು ಮಕ್ಕಳ ಉತ್ತಮ ಶಿಕ್ಷಣಕ್ಕೆ ಸಹಕಾರಿಯಾದ ಯೋಜನೆಯಾಗಿದ್ದು ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಮಕ್ಕಳಿಗೆ ತಿಳಿಸಿದರು.
ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಸುರೇಶಕುಮಾರ, ತಾಲೂಕು ಅಕ್ಷರದಾಸೋಹ ಅಧಿಕಾರಿ ಮಾರುತೆಪ್ಪ ಕೆ.ಎಚ್., ದೈಹಿಕ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಕವಿತಾ ಬಡಿಗೇರ ಹಾಗೂ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ಮುಖಂಡರು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ವಿಕಾಸ ಗ್ರಾಮೀಣ ಮತ್ತು ನಗರಾಭಿವದ್ಧಿ ಸಂಸ್ಥೆಯ ಅಧ್ಯಕ್ಷ ಸುಶೀಲ್ ನಾಡಿಗೇರ ಉಪಸ್ಥಿತರಿದ್ದರು.