ಸಾರಾಂಶ
ಸಭ್ಯತೆ ಮೀರದ ಮಾತುಗಾರಿಕೆ, ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ, ಅಧ್ಯಯನ ಶೀಲತೆ ಎಸ್ಎಂಕೆ ಶಕ್ತಿಯಾಗಿತ್ತು. ಅವರ ವ್ಯಕ್ತಿತ್ವ ರಾಜಕಾರಣಿಗಳಿಗಲ್ಲದೇ ವಿದ್ಯಾರ್ಥಿಗಳಿಗೂ ಅನುಕರಣೀಯ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿಪಿ. ತಿಪ್ಪೇಸ್ವಾಮಿ ಹೇಳಿದರು.
ಹಿರಿಯೂರು : ಎಸ್.ಎಂ. ಕೃಷ್ಣ ಅವರಲ್ಲಿನ ಸಭ್ಯತೆ ಮೀರದ ಮಾತುಗಾರಿಕೆ, ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ, ಅಧ್ಯಯನ ಶೀಲತೆ ಎಸ್ಎಂಕೆ ಶಕ್ತಿಯಾಗಿತ್ತು. ಅವರ ವ್ಯಕ್ತಿತ್ವ ರಾಜಕಾರಣಿಗಳಿಗಲ್ಲದೇ ವಿದ್ಯಾರ್ಥಿಗಳಿಗೂ ಅನುಕರಣೀಯ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿಪಿ. ತಿಪ್ಪೇಸ್ವಾಮಿ ಹೇಳಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರ ಶ್ರದ್ಧಾಂಜಲಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬಡಮಕ್ಕಳನ್ನು ಶಿಕ್ಷಣದತ್ತ ಸೆಳೆಯಲು ಆರಂಭಿಸಿದ ಬಿಸಿಯೂಟ ಹಾಗೂ ಮರಳಿ ಬಾ ಶಾಲೆಗೆ ಕಾರ್ಯಕ್ರಮ ಅವರಲ್ಲಿನ ಶಿಕ್ಷಣ ಬದ್ಧತೆಗೆ ಸಾಕ್ಷಿಯಾಗಿದೆ. ಕರ್ನಾಟಕವನ್ನು ಆಧುನೀಕರಣಗೊಳಿಸುವಲ್ಲಿ ಅವರ ಕೊಡುಗೆ ಅಪಾರವಾದುದು. ಐಟಿಬಿಟಿಯನ್ನು ರಾಜ್ಯಕ್ಕೆ ಕರೆತಂದು ವಿಶ್ವಭೂಪಟದಲ್ಲಿ ಬೆಂಗಳೂರಿನ ಹೆಸರನ್ನು ಬೆಳಗಿಸಿದ್ದು ಸಣ್ಣ ಸಾಧನೆಯೇನಲ್ಲ. ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರೆ ಎಸ್ಎಂ. ಕೃಷ್ಣ ವಿಕಾಸಸೌಧ ನಿರ್ಮಿಸುವ ಮೂಲಕ ದೂರದರ್ಶಿತ್ವ ಮೆರೆದರು ಎಂದು ತಿಳಿಸಿದರು.
ಸಂದರ್ಭನುಸಾರವಾಗಿ ಅವರು ಧರಿಸುತ್ತಿದ್ದ ವೇಷಭೂಷಣ ಶೈಲಿಯು ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ರಾಜಕಾರಣದ ಸಂಕಷ್ಟದ ಸಮಯದಲ್ಲಿಯೂ ಸಭ್ಯತೆ ಮೀರದ ಅವರ ಮಾತುಗಾರಿಕೆ, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ. ಎಸ್ಎಂ ಕೃಷ್ಣರವರ ಬದ್ಧತೆಯ ರಾಜಕಾರಣದಿಂದಾಗಿ ವಿಧಾನಸಭೆ, ಪರಿಷತ್, ರಾಜ್ಯಸಭೆ, ಲೋಕಸಭೆ ಸದಸ್ಯರಾಗಲ್ಲದೇ ಸಿಎಂ, ಸ್ಪೀಕರ್, ವಿದೇಶಾಂಗ ಸಚಿವ ಸ್ಥಾನ ಪಡೆದಿದ್ದು ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಕೆ. ರಂಗಪ್ಪ, ಉಪನ್ಯಾಸಕರಾದ ಈ. ನಾಗೇಂದ್ರಪ್ಪ, ಎಲ್. ಶಾಂತಕುಮಾರ್, ತಿಪಟೂರು ಮಂಜು, ಕಮಂಡಲಗುoದಿ ವೆಂಕಟೇಶ್, ಶಿಕ್ಷಕಿಯರಾದ ಪೂರ್ಣಚಂದ್ರ ತೇಜಸ್ವಿನಿ, ಅನುಷಾ, ಸುನೀತಕುಮಾರಿ, ನೂರಜಾನ್, ಲಕ್ಷ್ಮಿದೇವಿ, ಪಿರ್ದೋಸ್ ಭಾನು, ಕವಿತಮ್ಮ ಮುಂತಾದವರು ಹಾಜರಿದ್ದರು.