ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಕನ್ನಡಿಗರು ಹರಿದು ಹಂಚಿಹೋಗಿದ್ದರು. ಕನ್ನಡದ ಏಕೀಕರಣಕ್ಕೆ ಹಲವು ಮಹನೀಯರ ಹೋರಾಟ ಅನನ್ಯವಾದದು ಎಂದು ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದ್ದಾರೆ.ಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಡಾ.ರಾಜಕುಮಾರ್ ರವರ ಹೋರಾಟದ ಬದುಕು ಎಲ್ಲರಿಗೂ ಮಾದರಿಯಾಗಿದ್ದು, ಕೇವಲ ಚಲನಚಿತ್ರಗಳು ಅಲ್ಲದೆ ಕನ್ನಡದ ಭಾಷಾಭಿಮಾನ ಮೆಚ್ಚುವಂತಹದ್ದು. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನುಕೊಟ್ಟೆವು ಎಂಬುದು ಮುಖ್ಯವಾಗುತ್ತದೆ. ಬೆಂಗಳೂರಿನಲ್ಲಿ ಸಾಕಷ್ಟು ಭಾಷೆಗಳ ಸಮಸ್ಯೆ ಹೆಚ್ಚಾಗಿದ್ದ ಕಾರಣ ಎಚ್ಚೆತ್ತ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದೇ ಬೆಂಗಳೂರು ಉಳಿವಿಗೆ ಸಾಕ್ಷಿಯಾಗಿದೆ. ನಮ್ಮದು ಶ್ರೀಮಂತವಾದ ನಾಡು, ದೇಶದಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯವಾಗಿದ್ದು, ಸಮೃದ್ಧಿಯ ತವರೂರು. ಸಮಾಜದಲ್ಲಿ ಅಸೂಯೆ, ದ್ವೇಷ ಒಳ್ಳೆಯದಲ್ಲ, ಎಲ್ಲರೂ ಸಹಭಾಗಿತ್ವದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ನಿಜವಾದ ಮನುಷ್ಯತ್ವ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಲ್ಲೇಶ್ಗೌಡ, ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ, ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್, ಕನ್ನಡ ಪ್ರಾಧ್ಯಾಪಕ ಆರ್. ಕೆ. ಶಿವಪ್ಪ, ರೈತ ಸಂಘದ ಅಧ್ಯಕ್ಷ ಅರಳಾಪುರಮಂಜೇಗೌಡ, ಯಶೋಧ ಜೈನ್, ಜಬೀಉಲ್ಲಾ ಬೇಗ್, ಮಲ್ಲೇಗೌಡ, ದಿಂಡಗೂರು ಗೋವಿಂದರಾಜ್, ಶಿವನಗೌಡ ಪಾಟೀಲ್, ಮಾಧ್ಯಮ ಕಾರ್ಯದರ್ಶಿ ನಂದನ್ ಪುಟ್ಟಣ್ಣ, ಸಾವಿತ್ರಿ, ಗುರುಕುಲ ಸಂಘದ ಅಧ್ಯಕ್ಷ ರಾಮಣ್ಣ, ಮತ್ತಿತರಿದ್ದರು.