ಸಾರಾಂಶ
ಗೋಕರ್ಣ: ರಾಜ್ಯ ಹೆದ್ದಾರಿ ೧೪೩ರ ಮಾದನಗೇರಿ ಬಳಿಯಲ್ಲಿನ ರಸ್ತೆಯ ಬೃಹತ್ ಹೊಂಡಗಳನ್ನು ಸಾಮಾಜಿಕ ಕಾರ್ಯಕರ್ತ ಸಂದೀಪ ಅಗಸಾಲಿಯರು ಮುಚ್ಚಿ ಸರಿಪಡಿಸಿದ್ದಾರೆ.ಪುಣ್ಯಕ್ಷೇತ್ರ ಪ್ರವಾಸಿ ತಾಣ ಗೋಕರ್ಣಕ್ಕೆ ಬರುವ ಈ ಮಾರ್ಗದಲ್ಲಿ ಹಲವಾರು ತಿಂಗಳಿಂದ ಬೃಹತ್ ಹೊಂಡಗಳು ಬಿದ್ದು ಸಂಚಾರಕ್ಕೆ ತೊಡಕಾಗುತ್ತಿತ್ತು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಜನರು ಮನವಿ ಮಾಡುತ್ತಾ ಬಂದಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಕಳೆದ ವಾರ ಭಾರಿ ಮಳೆಗೆ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಡಕಾಗಿತ್ತು. ಹೊಂಡ ಎಲ್ಲಿದೆ ಎಂದು ತಿಳಿಯದೇ ವಾಹನ ಸವಾರರು ಮಧ್ಯೆ ಸಿಲುಕಿ ಪರದಾಡಿದ್ದರು. ಇಷ್ಟಾದರೂ ಇಲಾಖೆ ನಿರ್ಲಕ್ಷಿಸಿ ಸರಿಪಡಿಸದ ಕಾರಣ ಜನರೇ ತಮ್ಮ ಕೈಯಲ್ಲಿ ಆದಷ್ಟು ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಶುಕ್ರವಾರ ೫೦೦ ಮೀಟರ್ಗೂ ಹೆಚ್ಚು ದೂರದ ಮಾರ್ಗದಲ್ಲಿ ಹೊಂಡ ಮುಚ್ಚಿದ್ದಾರೆ. ಈ ಕಾರ್ಯಕ್ಕೆ ಹಿರೇಗುತ್ತಿಯ ಹರೀಶ ನಾಯಕ ಜೆ.ಸಿ.ಬಿ.ಯಂತ್ರ ನೀಡಿ ಸಹಕಾರ ನೀಡಿದ್ದಾರೆ.
ರಸ್ತೆಯ ಅಂಚಿನಲ್ಲಿ ಸ್ವಚ್ಛತೆ:ಹೆದ್ದಾರಿ ಪಕ್ಕದಲ್ಲಿನ ಗಿಡಗಳ ರಸ್ತೆಯನ್ನು ಆವರಿಸಿ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದರಿಂದ ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಈ ರೀತಿ ರಸ್ತೆ ಮುಚ್ಚಿದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಇದರ ಹೊರತಾಗಿ ಗಣೇಶನ ಮೂರ್ತಿ ವಿಸರ್ಜನೆಗೆ ಹೋಗುವ ಮಾರ್ಗ ಹಾಗೂ ಕೆರೆ ಸಹ ಸ್ವಚ್ಛಗೊಳಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ಜನರಿಗೆ ಅನುಕೂಲತೆ ಮಾಡಿಕೊಟ್ಟ ಸಂದೀಪ ಅವರಿಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ.