ಭವಿಷ್ಯದ ಬಗ್ಗೆ ಕಳವಳ ಹೊಂದಿದ್ದವರ ನೆನಪು ಇಂದಿಗೂ ಮುಖ್ಯ. ಆ ದಾರಿಯಲ್ಲಿ ನಡೆದವರನ್ನು ಹುಡುಕಿ ತಂದು ಜನತೆ ಮುಂದೆ, ಮಕ್ಕಳ ಮುಂದೆ, ವರ್ತಮಾನದ ಮುಂದೆ ನಿಲ್ಲಿಸಿ ‘ನೋಡಿ ಇವರನ್ನ’ ಎಂದು ಹೇಳಬೇಕಾದ ಸ್ಥಿತಿಗೆ ನಾವು ಬಂದಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯರ ಅಗತ್ಯವೇ ಕಡಿಮೆ ಆಗುತ್ತಿದೆ. ಇಂತಹ ಹೊತ್ತಿನಲ್ಲಿ ಸಮಾಜ ಸೇವೆಯನ್ನು ಹೇಗೆ ಪರಿಪಾಲಿಸಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅಭಿಪ್ರಾಯಪಟ್ಟರು.ಜನದನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ೨೯ನೇ ವರ್ಷದ ಇಂಡುವಾಳು ಎಚ್.ಹೊನ್ನಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ದೇವಮ್ಮ ಇಂಡುವಾಳು ಎಚ್. ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಮತ್ತು ಎಚ್. ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಭವಿಷ್ಯದ ಬಗ್ಗೆ ಕಳವಳ ಹೊಂದಿದ್ದವರ ನೆನಪು ಇಂದಿಗೂ ಮುಖ್ಯ. ಆ ದಾರಿಯಲ್ಲಿ ನಡೆದವರನ್ನು ಹುಡುಕಿ ತಂದು ಜನತೆ ಮುಂದೆ, ಮಕ್ಕಳ ಮುಂದೆ, ವರ್ತಮಾನದ ಮುಂದೆ ನಿಲ್ಲಿಸಿ ‘ನೋಡಿ ಇವರನ್ನ’ ಎಂದು ಹೇಳಬೇಕಾದ ಸ್ಥಿತಿಗೆ ನಾವು ಬಂದಿದ್ದೇವೆ ಎಂದರು.ಸ್ವಾತಂತ್ರ ಪೂರ್ವ ಮತ್ತು ನಂತರದ ಕೆಲವು ದಶಕಗಳಲ್ಲಿ ಎಲ್ಲ ಊರುಗಳಲ್ಲೂ ಸಮಾಜ ಸೇವೆ ಮಾಡುವ ಸಜ್ಜನರಿಗೆ ಒಂದು ನೈತಿಕತೆ ಇತ್ತು. ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಅದನ್ನು ಕಾಣಲು ಸಾಧ್ಯವಿಲ್ಲ. ಯಾರ ಹೆಸರಿನಲ್ಲಿ ನಾವು ಪ್ರಶಸ್ತಿ ಕೊಡುತ್ತಿದ್ದೇವೆಯೋ ಅಂತಹ ಹೆಸರುಗಳೇ ಮುಂದೆ ಕಣ್ಮರೆಯಾಗುವ ಕಾಲ ಬಂದಿದೆ ಎಂದರು.
ಇಂದು ಪುರಸ್ಕಾರ ಪಡೆದ ಈ ಮಕ್ಕಳಿಗೆ ಇದು ದೊಡ್ಡ ಉತ್ತೇಜನವಾಗಿದೆ. ಅವರ ಮುಂದಿನ ಕಲಿಕೆಗೆ ಬೇಕಾದ ಸ್ಫೂರ್ತಿಯನ್ನು ಈ ಪುರಸ್ಕಾರಗಳು ನೀಡುತ್ತವೆ ಎಂದು ಹೇಳಿದರು.ಚಿಂತಕ ಡಾ. ಎಸ್.ತುಕಾರಾಂ ಅವರು ಅಭಿನಂದನಾ ನುಡಿಗಳನ್ನಾಡಿ, ‘ಪ್ರಶಸ್ತಿ ಪುರಸ್ಕೃತರಾದ ಮೂವರು ತಮ್ಮ ಜೀವಿತಾವಧಿಯ ಹಲವು ದಶಕಗಳ ಕಾಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಧನ, ಮನ, ಕಾಲವನ್ನು ವಿನಿಯೋಗಿಸಿದ್ದಾರೆ. ಅವರ ಸಾಧನೆಗೆ ಇಂದು ಈ ಭವನದಲ್ಲಿ ಸಿಕ್ಕ ಗೌರವ ಅತ್ಯಂತ ಮಹತ್ವದ್ದು’ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮೂವರು ಸಾಧಕರಿಗೆ ಗೌರವ:ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿಯನ್ನು ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ನಿಲಯದ ನಿವೃತ್ತ ನಿರ್ದೇಶಕ ಬೆಳ್ಳಶೆಟ್ಟಿಯವರಿಗೆ, ದೇವಮ್ಮ ಇಂಡುವಾಳು ಹೆಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿಯನ್ನು ಡಾ.ಆರ್.ತಾರಾ ಅವರಿಗೆ, ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ಸೋಮಶೇಖರ್ (ವಾಲಿಬಾಲ್ ಸೋಮಣ್ಣ) ಅವರಿಗೆ ೨೫೦೦೦ ರು. ನಗದು ಹಾಗು ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.
೨೦೨೫-೨೬ನೇ ಸಾಲಿನ ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರಕ್ಕೆ ಎಂ.ಆರ್.ದೀಕ್ಷಿತಾ, ಚಂದನ್ ಬಿ.ಎಂ., ಚೈತ್ರಾ, ಜ್ಯೋತಿ ಬಿ.ಎನ್. ಆಯ್ಕೆ. ತಲಾ ರೂ. ೫,೦೦೦ ನೀಡಿ ಪುರಸ್ಕರಿಸಲಾಯಿತು.ಸಮಾರಂಭದಲ್ಲಿ ರೈತ ಹೋರಾಟಗಾರ ಎಚ್.ಚಂದ್ರಶೇಖರ್, ಟ್ರಸ್ಟ್ ಅಧ್ಯಕ್ಷ ಕೆ. ಜಯರಾಂ, ಕಾರ್ಯದರ್ಶಿ ಎಚ್.ಡಿ. ಸೋಮಶೇಖರ್, ಡಾ.ಆದಿತ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.