ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡದಾರಿ

| Published : Jul 22 2025, 01:15 AM IST

ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಧೂಮಪಾನ, ಮದ್ಯಪಾನ ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡ ದಾರಿಯಿಂದ ನಡೆಯುತ್ತಿದೆ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸವಣೂರು

ಧೂಮಪಾನ, ಮದ್ಯಪಾನ ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡ ದಾರಿಯಿಂದ ನಡೆಯುತ್ತಿದೆ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬೇಡ ಜಂಗಮ ಸಮಾಜದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಓದಿದರೇ ಸಾಲದು, ದುಶ್ಚಟಗಳ ದಾರಿ ಹಿಡಿದರೇ ನಮ್ಮ ವ್ಯಕ್ತಿತ್ವಕ್ಕೆ ಅಲ್ಲದೆ ನಮಗೆ ಸಂಸ್ಕಾರ ನೀಡಿದ ವ್ಯಕ್ತಿಗಳ ಹೆಸರಿಗೆ ಧಕ್ಕೆ ಬರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜವನ್ನು ಆದರ್ಶವನ್ನಾಗಿ ಮಾಡಬೇಕು. ದುಶ್ಚಟಗಳಿಂದ ದುರುಳಿದುಕೊಂಡಾಗ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಸಾಧನೆ ಮಾಡಿದ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ. ಸಮಾಜ ಗುರುತಿಸುವಂತ ಕೆಲಸವನ್ನು ಪರಿಶ್ರಮಪಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.ಶಾಸಕ ಯಾಸೀರಅಹ್ಮದಖಾನ್ ಪಠಾಣ ಮಾತನಾಡಿ, ಜಂಗಮ ಸಮಾಜದ ಸಭಾಭವನ ನಿರ್ಮಾಣಕ್ಕೆ ₹೧ ಕೋಟಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.ಜಂಗಮ ಸಮಾಜ ಬಾಂಧವರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಶಾಸಕನನ್ನಾಗಿ ಆಯ್ಕೆ ಮಾಡಿದ ಸಮಾಜದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಕ್ಷೇತ್ರದ ಎಲ್ಲ ಮಠ-ಮಾನ್ಯಗಳ ಅಭಿವೃದ್ಧಿಗೆ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಋಣ ತೀರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ೨೦೧೭ರಲ್ಲಿ ಎಚ್.ಆಂಜನೇಯವರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದ ವಿದ್ಯಾರ್ಥಿ ಚೇತನ ಹಿರೇಮಠಗೆ ವಿದೇಶದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ ಸರ್ಕಾರದಿಂದ ₹೪೮ ಲಕ್ಷ ಶಿಷ್ಯ ವೇತನ ನೀಡಿದ್ದರು. ಯಾವ ಆಧಾರದ ಮೇಲೆ ಹಣ ನೀಡಿದ್ದೀರಿ?. ನಾವು ಬೇಡ ಜಂಗಮರು ಅಲ್ಲ ಎನ್ನುವಂತದ್ದನ್ನು ಯಾವ ರೀತಿಯಲ್ಲಿ ಸಾಬೀತು ಮಾಡುತ್ತೀರಿ?. ನಾವೂ ನೋಡುತ್ತೇವೆ ಎಂದು ಮಾಜಿ ಸಚಿವರಿಗೆ ಬಹಿರಂಗ ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ಸಾಧಕರಿಗೆ ಬೇಡ ಜಂಗಮ ಸೇವಾ ಸಂಸ್ಥೆಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಬೇಡ ಜಂಗಮ ಸಮಾಜದ ಕಾರ್ಯದರ್ಶಿ ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಡ ಜಂಗಮ ಸಮಾಜ ಸೇವಾ ಸಂಸ್ಥೆ ತಾಲೂಕು ಅಧ್ಯಕ್ಷ ಚಂದ್ರಶೇಖರಯ್ಯ ಗುಂಡೂರಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೀದರ ಜಿಲ್ಲೆಯ ಸರಿಗಮಪ ಸೀಸನ್‌-೨೧ ವಿಜೇತೆ ಶಿವಾನಿ ಶಿವದಾಸಸ್ವಾಮಿ ಹಾಗೂ ಕುಟುಂಬಸ್ಥರಿಂದ ಸಂಗೀತ ಸೇವೆ ಜರುಗಿತು. ಬೇಡ ಜಂಗಮ ಸಮಾಜ ಸೇವಾ ಸಂಸ್ಥೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ಪ್ರಮುಖರಾದ ನಂದೀಶ ಕಂಬಾಳಿಮಠ, ಉಮೇಶ ಕಲ್ಮಠ, ಶಿವಕುಮಾರಸ್ವಾಮಿ ಅಡವಿಸ್ವಾಮಿಮಠ ಸೇರಿದಂತೆ ಜಂಗಮ ಸಮಾಜ ಬಾಂಧವರು ಇದ್ದರು.ಇತಿಹಾಸ ಸೃಷ್ಟಿಸುವಂತ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಮಕ್ಕಳಿಗೆ ಆಸ್ತಿಯನ್ನು ಮಾಡದೇ ಉನ್ನತವಾದ ಶಿಕ್ಷಣ ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಲು ಪಾಲಕರು ಮುಂದಾಗಬೇಕು.

-ಎಸ್.ಬಿ.ವಸ್ತ್ರಮಠ,

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತರು.