ಪ್ರತಿಯೊಬ್ಬರೂ ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಶನಿವಾರಸಂತೆ

ಪ್ರತಿಯೊಬ್ಬರೂ ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ಅಭಿಪ್ರಾಯಪಟ್ಟರು.

ಮಂಗಳವಾರ ಸ್ಥಳೀಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಟ್ಯಾಕ್ಷಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಸೋಮವಾರಪೇಟೆ ತಾಲೂಕು ಸಮಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ, ಅಪರಾಧ ತಡೆ ಹಾಗೂ ವಾರ್ಷಿಕ ರೂಪಿಕರಣ ಸಭೆಯಲ್ಲಿ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಆಟೋ ಮತ್ತು ವಾಹನ ಚಾಲಕರು ಮಾದಕ ವಸ್ತು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಅಂತವರ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಕೈಗೊಳ್ಳುತ್ತದೆ. ಸಾರ್ವಜನಿಕರು ಇಂತಹ ಪ್ರಕರಣ ಕಂಡು ಬಂದಾಗ ಮಾಹಿತಿ ನೀಡಬೇಕು ಎಂದರು.

ಟ್ಯಾಕ್ಷಿ ಚಾಲಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನ್ಸಂಟ್ ಬಾಬು ಮಾತನಾಡಿ, ವಾಹನ ಚಾಲಕರ ಸಂಸ್ಥೆಯು ಸುಮಾರು ೭ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾವುದೆ ಕಡೆಯಲ್ಲಿ ಚಾಲಕರು ಅಪಘಾತಕ್ಕೆ ಈಡಾದ ವೇಳೆ ಸಂಸ್ಥೆಯು ಸಹಾಯ ನೀಡುತ್ತದೆ ಎಂದರು.

ಸಭೆಯಲ್ಲಿ ನಡೆದ ಚರ್ಚೆ: ಹಳದಿ ಬೋರ್ಡ್ ವಾಹನ ಮಾಲೀಕರಿಗೆ ಸರ್ಕಾರದಿಂದ ಯಾವುದೇ ಭದ್ರತೆ ಮತ್ತು ರಕ್ಷಣೆ ಇಲ್ಲ, ವೈಟ್ ಬೋರ್ಡ್ ವಾಹನಗಳ ಹಾವಳಿಯಿಂದ ಯಲ್ಲೋ ಬೋರ್ಡ್ ಚಾಲಕ ಮತ್ತು ಮಾಲೀಕರಿಗೆ ಅನ್ಯಾಯವಾಗುತ್ತಿದ್ದು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಮತ್ತು ಗ್ರಾಮೀಣ ಭಾಗಗಳಿಂದ ಶಾಲಾ ಮಕ್ಕಳನ್ನು ವೈಟ್ ಬೋರ್ಡ್ ಮಾಲೀಕರು ವಾಹನಗಳಲ್ಲಿ ೩೦ ರಿಂದ ೪೦ ರಷ್ಟು ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತ ವೇಳೆ ಎಲ್ಲೋ ಬೋರ್ಡ್ ಚಾಲಕರು ರಕ್ಷಣೆಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳು ಇಂತಹ ವಾಹನ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸಂಘದ ಕೋಶಾಧಿಕಾರಿ ದೀಪಕ್ ಸಭೆಯಲ್ಲಿ ಆರ್‌ಟಿಒ ಅಧಿಕಾರಿಗಳ ಗಮನ ಸೆಳೆದರು. ಕೊಡಗಿನಲ್ಲಿ ಈಗಾಗಲೆ ಇಂತಹ ವಾಹನಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗಿದೆ ಮುಂದೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗಗಳಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆರ್‌ಟಿಒ ಪ್ರದೀಪ್ ಭರವಸೆ ನೀಡಿದರು.

ತಾಲೂಕು ಸಂಘದ ಅಧ್ಯಕ್ಷ ವಸಂತ್ ಆಚಾರ್ಯ, ಜಿಲ್ಲಾ ಮತ್ತು ತಾಲೂಕು ಸಂಘದ ಪ್ರಮುಖರಾದ ಪರಶುರಾಮ್, ಡೆನ್ನಿಸ್, ಪ್ರದೀಪ್ ಚಾಮೇರ, ಕೃಷ್ಣಮಣಿ, ಹೇಮಂತ್, ಸಂತು ಕಾರ್ಯಪ್ಪ, ಪ್ರಕಾಶ್ ಪಟ್ಟು ಮತ್ತಿತರರಿದ್ದರು.