ಧಾರವಾಡ:
ಸಮಾಜದಲ್ಲಿ ಹಲವಾರು ವೇದಿಕೆಗಳು ಹೊಸ ಪ್ರತಿಭೆಗಳ ಆಗಮನಕ್ಕಾಗಿ ಕಾದು ಕುಳಿತಿವೆ. ಆ ವೇದಿಕೆ ನಿಮ್ಮದು ಆಗಬಹುದು. ಸರಿಯಾದ ಕೌಶಲ್ಯದೊಂದಿಗೆ ನಿಮ್ಮ ಪ್ರತಿಭೆ ಅನಾವರಣಗೊಳಿಸಿ. ಸ್ಫರ್ಧೆಗಳಲ್ಲಿ ಗೆಲುವು ಮುಖ್ಯವಲ್ಲ, ಕಲಿಯುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ಇಲ್ಲಿಯ ವಿದ್ಯಾಗಿರಿಯ ಜೆಎಸ್ಎಸ್ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರಮಟ್ಟದ ಸಂಕಲ್ಪ-2026 ಪ್ರತಿಭಾನ್ವೇಷಣೆಯನ್ನು ಶುಕ್ರವಾರ ಉದ್ಘಾಟಿಸಿದ ಅವರು, ರಾಜ್ಯ, ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಅಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮತ್ತು ಧೈರ್ಯ ತುಂಬುತ್ತವೆ. ಅವರಲ್ಲಿ ಯಾವುದೇ ಗುರಿ ತಲುಪಲು ಇವುಗಳು ಮಾರ್ಗದರ್ಶಕವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಪ್ರತಿಭಾ ಕೌಶಲ್ಯ ಬೆಳೆಯುತ್ತ ಸಾಗಬೇಕು. ಇದು ನಿಮ್ಮ ಜನಪ್ರಿಯತೆ ಹೆಚ್ಚಿಸುತ್ತದೆ ಎಂಬ ಸಲಹೆ ನೀಡಿದರು. ಚಲನಚಿತ್ರ ಗಾಯಕ, ನಿರ್ದೇಶಕ ಮತ್ತು ಕಲಾವಿದ ನವೀನ ಸಜ್ಜು ಮಾತನಾಡಿ, ಜೆಎಸ್ಎಸ್ನಲ್ಲಿ ನೈತಿಕ ಶಿಕ್ಷಣ ದೊರೆಯಲು ಪ್ರಮುಖವಾಗಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರ 55 ವರ್ಷಗಳ ಪರಿಶ್ರಮವೇ ಕಾರಣ ಎಂಬುದನ್ನು ಈ ಸಂಸ್ಥೆಗಳ ಪ್ರತಿ ಗೋಡೆಗಳಲ್ಲಿ ಪ್ರತಿ ಧ್ವನಿಸುತ್ತದೆ. ಅವರ ಉತ್ಸಾಹ, ಕಾರ್ಯದಕ್ಷತೆ ಶಿಸ್ತು ಯುವ ಜನಾಂಗಕ್ಕೆ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಧಾರವಾಡ ಸಂಗೀತ, ಸಂಸ್ಕೃತಿ, ಸಾಹಿತ್ಯದ ತವರೂರು. ಇದರ ಪರಿಚಯ ಮಾಡಿಸುವ ಪ್ರಯತ್ನ ಸಂಕಲ್ಪ. ಕೇವಲ ಪಾಠ-ಪ್ರವಚನಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಅಂಕಗಳೊಂದಿಗೆ ಕೌಶಲ್ಯವು ಅವಶ್ಯ. ಆಗ ವಿದ್ಯಾರ್ಥಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ. ವಿದ್ಯಾರ್ಥಿಗಳು ಗುಣಮಟ್ಟದ ಮೌಲ್ಯ ಬೆಳೆಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.ಉಪಪ್ರಾಚಾರ್ಯ ಡಾ. ಸೂರಜ್ ಜೈನ ಸ್ವಾಗತಿಸಿದರು. ಸುದರ್ಶನ ಗೋಕರ್ ಪರಿಚಯಿಸಿದರು. ರಶ್ಮೀ ಎಸ್.ಎಚ್. ವಂದಿಸಿದರು. ರವೀನಾ, ರಶ್ಮೀ ನಿರೂಪಿಸಿದರು. ಮಹಾವೀರ ಉಪಾಧ್ಯೆ, ಡಾ. ವೆಂಕಟೇಶ್ ಮುತಾಲಿಕ್, ಡಾ. ಆರ್.ವಿ ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ, ಡಾ. ಜಿನ್ನಪ್ಪ ಕುಂದಗೋಳ ಇದ್ದರು.