ನೀಲ್ಗಾಯ್‌ನ ಮರಿಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಓಡಿಬಂಧ ತಾಯಿ ನೀಲ್ಗಾಯ್ ತನ್ನ ಕೊಂಬಿನಿಂದ ಹರ್ಷಿತ್‌ನ ಹೊಟ್ಟೆ ಭಾಗಕ್ಕೆ ತಿವಿದು ಗಂಭೀರ ಗಾಯಗೊಳಿಸಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯೋಧ ಮೃತಪಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಗುಜರಾತ್‌ನ ಜಾಮ್ ನಗರದ ನೌಕಾಪಡೆಯ ಕ್ಯಾಂಪ್‌ನಲ್ಲಿ ಇತ್ತೀಚೆಗೆ ತರಬೇತಿಗಾಗಿ ಸೇರಿದ್ದ ಕೋಲಾರದ ಯೋಧ ಹರ್ಷಿತ್ ಪ್ರಸನ್ನ(೨೨) ಎಂಬುವರ ಮೇಲೆ ಮಾ.೧೨ ರಂದು ರಾತ್ರಿ ಕಾಡುಪ್ರಾಣಿ ನೀಲ್ಗಾಯ್ ದಿಢೀರ್‌ ದಾಳಿ ನಡೆಸಿ ಕೊಂಬಿನಿಂದ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅ‍ವರನ್ನು ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಗುಜರಾತ್‌ನ ಜಾಮ್ ನಗರ ಕ್ಯಾಂಪ್‌ನಲ್ಲಿ ಮೃತಪಟ್ಟ ಹರ್ಷಿತ್‌ನ ಪಾರ್ಥಿವ ಶರೀರವನ್ನು ಗುರುವಾರ ಮುಂಜಾನೆ ಪೋಷಕರಿಗೆ ನೌಕಾಪಡೆಯ ಸಿಬ್ಬಂದಿಗಳು ಒಪ್ಪಿಸಿದ್ದರು. 

ಇದಾದ ನಂತರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿತ್ತು. ನಂತರ ಗಲ್‌ಪೇಟೆಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ಹರ್ಷಿತ್‌ ಅಂತ್ಯ ಸಂಸ್ಕಾರಗಳನ್ನು ನೆರವೇರಿಸಲಾಯಿತು.

ಈ ವೇಳೆ ಮಗನನ್ನು ಕಳೆದುಕೊಂಡ ಹರ್ಷಿತ್‌ನ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು, ಹರ್ಷಿತ್‌ನ ತಾಯಿ ಸರಳ ಮಗನ ಕ್ಯಾಪ್ ಹಾಗೂ ಪೋಟೋ ಹಿಡಿದುಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯವಂತೂ ಕರುಳು ಹಿಂಡುವಂತಿತ್ತು.

4 ವರ್ಷಗಳಿಂದ ನೌಕಾಪಡೆ ಸೇವೆ: ನಗರದ ಗಲ್‌ಪೇಟೆಯ ಪ್ರಸನ್ನ ಮತ್ತು ಸರಳ ಎಂಬುವರ ಮಗ ಹರ್ಷಿತ್ ಪ್ರಸನ್ನ(೨೨) ಕಳೆದ ನಾಲ್ಕು ವರ್ಷಗಳ ಹಿಂದೆ ನೌಕಾಪಡೆಯಲ್ಲಿ ಕೆಲಸಕ್ಕೆ ಸೇರಿದ್ದರು, ವಿವಿಧ ಹಂತಗಳ ತರಬೇತಿ ಮುಗಿಸಿ ಉನ್ನತ ಹುದ್ದೆ ಅಲಂಕರಿಸುವ ಗುರಿಯನ್ನು ಹೊಂದಿದ್ದರು, ಅದಕ್ಕಾಗಿಯೇ ಗುಜರಾತ್‌ನ ಜಾಮ್ ನಗರದ ನೌಕಾಪಡೆಯ ಕ್ಯಾಂಪ್‌ನಲ್ಲಿ ಇತ್ತೀಚೆಗಷ್ಟೇ ಅಲ್ಲಿ ತರಬೇತಿಗಾಗಿ ಸೇರಿದ್ದರು, ಆದರೆ ಕಳೆದ ಸೋಮವಾರ ನಡೆದ ಕಾಡುಮೃಗದ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಮರಿಗಳನ್ನು ಓಡಿಸುವಾಗ ತಾಯಿ ದಾಳಿ ನಿತ್ಯ ತನ್ನ ತಂದೆ ತಾಯಿ ಜೊತೆಗೆ ಪೋನ್‌ನಲ್ಲಿ ಮಾತನಾಡುತ್ತಿದ್ದ ಹರ್ಷಿತ್ ಸಾಯುವ ಕೆಲವೇ ನಿಮಿಷಗಳ ಮೊದಲಷ್ಟೇ ಪೊಷಕರೊಂದಿಗೆ ಮಾತನಾಡಿದ್ದರು. 

ಅದಾದ ನಂತರ ಹರ್ಷಿತ್ ಪ್ಲಾಸ್ಟಿಕ್ ತಿನ್ನಲು ಹೋಗುತ್ತಿದ್ದ ಕಾಡುಪ್ರಾಣಿ ನೀಲ್ಗಾಯ್‌ನ ಮರಿಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಓಡಿಬಂಧ ತಾಯಿ ನೀಲ್ಗಾಯ್ ಪ್ರಾಣಿ ತನ್ನ ಕೊಂಬಿನಿಂದ ಹರ್ಷಿತ್‌ನ ಹೊಟ್ಟೆ ಭಾಗಕ್ಕೆ ತಿವಿದು ಗಂಭೀರ ಗಾಯಗೊಳಿಸಿತು.

ಇದಾದ ಕೆಲವೇ ನಿಮಿಷಗಳಲ್ಲಿ ಹರ್ಷಿತ್ ಸಾವನ್ನಪ್ಪಿರುವುದಾಗಿ ಅಲ್ಲಿನ ಸಿಬ್ಬಂದಿಗಳು ಹರ್ಷಿತ್ ಪೊಷಕರಿಗೆ ವಿಷಯ ಮುಟ್ಟಿಸಿದ್ದಾಗಿ ಎಂದು ಹರ್ಷಿತ್‌ರ ತಂದೆ ಪ್ರಸನ್ನ ತಿಳಿಸಿದರು.

ಕೋಲಾರದಿಂದ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವೇ ಕೆಲವು ಯುವಕರ ಪೈಕಿ ಹರ್ಷಿತ್ ಕೂಡಾ ಒಬ್ಬರು, ನೌಕಾಪಡೆಯ ಎಲ್ಲಾ ಪರೀಕ್ಷೆಗಳಲ್ಲೂ ಕೂಡಾ ರ್‍ಯಾಂಕ್ ಪಡೆದು ಪಾಸ್ ಆಗಿದ್ದ ಹರ್ಷಿತ್ ಉತ್ತಮ ಹುದ್ದೆಗೇರುವ ಮೂಲಕ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದರು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದರು.