ಸಾರಾಂಶ
ಡಾ. ಮಂಜುಳಾ ಹುಲ್ಲಳ್ಳಿ ಅವರ ಅನುವಾದಿತ ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯೋಧರು, ದೇಶದ ಅಂಗ ರಕ್ಷಕರು. ದೇಶವನ್ನೇ ತಮ್ಮ ದೇಹ ಎಂದು ಭಾವಿಸಿ ಕಾಪಾಡುವ ಅವರ ಸೇವೆ ಕುರಿತ ಮಂಜುಳಾ ಹುಲ್ಲಳ್ಳಿಯವರ ಅನುವಾದಿತ ಕೃತಿ ಒಂದು ಸಾರ್ಥಕ ಕೃತಿ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರಸನ್ನ ಇಂಟರ್ ನ್ಯಾಷನಲ್ಸ್ ಮೈಸೂರು, ಜಿಲ್ಲಾ ಮಾಜಿ ಯೋಧರ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನ ಸೇವಾ ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ಅವರ ಅನುವಾದಿತ ಕೃತಿ ಹಮಾರೆ ಗೌರವ ಶಾಲಿ ಯೋಧ ಹಾಗೂ ನಮ್ಮ ಹೆಮ್ಮೆಯ ಯೋಧ ಮರು ಮುದ್ರಣ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.ಯೋಧರ ಬಗ್ಗೆ ಬರೆದಿರುವ ಸಾಹಿತ್ಯ ಕರುಳು, ಹೃದಯವ ಹಿಂಡುವಂತಿದೆ. ಬಹು ದೊಡ್ಡ ಸ್ಥಾನದಲ್ಲಿದ್ದು, ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಯೋಧರ ಬಗ್ಗೆ ಉತ್ತಮ ಕೃತಿ ರಚಿಸಿದ್ದಾರೆ. ಮಂಜುಳಾ ಅವರು ಸಾಹಿತ್ಯ ಕ್ಷೇತ್ರಕ್ಕೆ ಮಂಗಳಕರ ವಾದುದನ್ನೇ ನೀಡಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಮಾತನಾಡಿ, ಯೋಧರ ಕುರಿತು ರಚಿಸಿರುವ ಮಂಜುಳಾ ಹುಲ್ಲಳ್ಳಿ ಅವರ ಕೃತಿ ಆಸಕ್ತಿದಾಯಕವಾಗಿದ್ದು, ಪ್ರತಿಯೊಬ್ಬರೂ ಅದನ್ನು ಕೊಂಡು ಓದಬೇಕು. ಯೋಧರಿಗಿರುವ ಗೌರವವನ್ನು ಪುಸ್ತಕದ ಮೂಲಕ ಎಲ್ಲರ ಮುಂದೆ ತಂದಿರುವುದು ಹೆಮ್ಮೆ ವಿಚಾರ ಎಂದು ಹೇಳಿದರು.
ದೇಶಕ್ಕಾಗಿ ಹೋರಾಡಿದ ಅಪ್ರತಿಮ ಯೋಧರ ಬಗ್ಗೆ ಮಕ್ಕಳಿಗೆ ಕಾಮಿಕ್ಸ್ ರೂಪದ ಕೃತಿಗಳೂ ಬಂದಿವೆ. ವಿದ್ಯಾರ್ಥಿಗಳು ಸಹ ಉನ್ನತ ವ್ಯಾಸಂಗಗಳಿಸಿ ಇಂಜಿನಿಯರ್, ವೈದ್ಯರು ಏನು ಬೇಕಾದರೂ ಆಗಲು ಸಾಧ್ಯವಿದೆ. ಆದರೆ, ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ಸಿಕ್ಕರೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕೃತಿಗಳ ಕತೃ ಡಾ. ಮಂಜುಳಾ ಹುಲ್ಲಳ್ಳಿ ಅವರನ್ನು ಗೌರವಿಸಲಾಯಿತು. ರಾಜಯೋಗಿನಿ ಬಿ.ಕೆ.ಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರತಿನಿಧಿ ಎಚ್.ಡಿ.ಸುರೇಶ್, ಕೃತಿಯ ಹಿಂದಿ ಅನುವಾದಕರಾದ ಡಾ.ಜಿ.ಎಸ್.ದೇವಕಿ ಪ್ರಸನ್ನ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಉಪ ನಿರ್ದೇಶಕಿ ಡಾ. ಟಿ.ಸಿ. ಪೂರ್ಣಿಮಾ, ಜಿಲ್ಲಾ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾ. ಸಿ.ಎಸ್.ಮಂಜುನಾಥ್, ಸಂಸ್ಕೃತಿ ಚಿಂತಕ ಎಚ್.ಎಸ್. ಸತ್ಯನಾರಾಯಣ್, ಯೋಧ ಕೆ.ವೈ. ಕಮಲೇಶ್ಗೌಡ ಉಪಸ್ಥಿತರಿದ್ದರು.31 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನ ಪ್ರಕಾಶ ಭವನದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಡಾ. ಮಂಜುಳಾ ಹುಲ್ಲಳ್ಳಿ ಅವರ ಅನುವಾದಿತ ಕೃತಿ ಹಮಾರೆ ಗೌರವ ಶಾಲಿ ಯೋದ್ಧ್ ಹಾಗೂ ನಮ್ಮ ಹೆಮ್ಮೆಯ ಯೋಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಉದ್ಘಾಟಿಸಿದರು.