ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗನಾನು ನಿಮ್ಮ ಮನೆ ಮಗ, ದಯವಿಟ್ಟು ನನಗೆ ಮತ ನೀಡಿ ಆಶೀರ್ವದಿಸಿ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ. ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ವಿಶ್ವಾಸ, ನಿಮ್ಮ ಮತಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಕೈ ಮುಗಿದು ಮತದಾರರಲ್ಲಿ ವಿನಂತಿಸಿದರು.ರಾಮದುರ್ಗ ವಿಧಾನಸಭಾ ಕ್ಷೇತ್ರದ ಹಳೇತೋರಗಲ್ ಗ್ರಾಮದಲ್ಲಿ ಶುಕ್ರವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಗಳನ್ನು ಅರಿತಿದ್ದೇನೆ. ಇಲ್ಲಿಯ ಬೇಕು, ಬೇಡಗಳನ್ನು ತಿಳಿದಿದ್ದೇನೆ. ಇಲ್ಲಿನ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಮಾಡುವಂತ ಅವಕಾಶ ಕಲ್ಪಿಸುತ್ತೇನೆ. ಜಿಲ್ಲೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುತ್ತೇನೆ. ಉದ್ಯಮ, ಪ್ರವಾಸೋದ್ಯಮ ಬೆಳವಣಿಗೆಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಒಮ್ಮೆ ಅವಕಾಶ ಕೊಡಿ ಎಂದು ಕೋರಿದರು. ಚಿಲ್ಮೂರ ಗ್ರಾಮ, ಹೊಸಕೋಟೆ ಹಾಗೂ ಚಿಕ್ಕೊಪ್ಪ ಗ್ರಾಮಗಳಲ್ಲಿ ಮೃಣಾಲ ಹೆಬ್ಬಾಳಕರ್ ಪ್ರಚಾರ ನಡೆಸಿದರು. ಪ್ರಚಾರಕ್ಕೂ ಮುನ್ನ ಎಲ್ಲೆಡೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ನೀಡಿ, ಆರಂತಿ ಮಾಡಿ ಬರಮಾಡಿಕೊಂಡರು. ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ್ ನನ್ನು ಬೆಂಬಲಿಸುವ ಭರವಸೆ ನೀಡಿದರು. ಈ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಗ್ರಾಮದ ಹಿರಿಯರು, ನೂರಾರು ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ.-ಮೃಣಾಲ ಹೆಬ್ಬಾಳಕರ್,
ಕಾಂಗ್ರೆಸ್ ಅಭ್ಯರ್ಥಿ.