ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದೂಗಳ ಬಗ್ಗೆ, ದೇಶದ ಬಗ್ಗೆ ಕಳಕಳಿ ಇದ್ದರೆ, ಹಿಂದೂಗಳ ವೋಟ್ ಬೇಕಿದ್ದರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರು ಅಯೋಧ್ಯೆಯ ಶ್ರೀ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ. ಅವರು ರಾಮಮಂದಿರಕ್ಕೆ ಬರೋದು ವೋಟಿಗಾಗಿಯೇ. ಸಾಬರ ವೋಟ್ ಬೇಕಿದ್ದರೆ ಮೆಕ್ಕಾ ಮದೀನಾಕ್ಕೆ ಹೋಗಲಿ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.ನಗರದಲ್ಲಿ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿಯವರಿಗೆ ಆಹ್ವಾನ ನೀಡಿದ್ದು, ಅವರು ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಹಿಂದುಗಳಲ್ಲಿ ವೈರಿಗಳನ್ನೂ ಸ್ವಾಗತ ಮಾಡುವುದು ಧರ್ಮ. ಹೀಗಾಗಿ ಸೋನಿಯಾಗಾಂಧಿಗೆ ಆಹ್ವಾನ ನೀಡಿದ್ದಾರೆ. ಆದರೆ, ಅಯೋಧ್ಯೆಯ ರಾಮಮಂದಿರ ವಿರುದ್ಧ ಕಾಂಗ್ರೆಸ್ 25 ಜನ ವಕೀಲರನ್ನು ಸುಪ್ರೀಂ ಕೋರ್ಟ್ನಲ್ಲಿ ನಿಲ್ಲಿಸಿತ್ತು. ಹಿರಿಯ ಮುಖಂಡ ಕಪಿಲ್ ಸಿಬಲ್ ಸೇರಿ 27 ವಕೀಲರು, ಕಾಂಗ್ರೆಸ್ ಸದಸ್ಯರು ನ್ಯಾಯಾಲಯದಲ್ಲಿ ರಾಮ ಮಂದಿರ ವಿರುದ್ಧ ವಾದ ಮಂಡಿಸಿದ್ದಾರೆ. ರಾಮ ಎಂಬುದು ಕೇವಲ ಕಲ್ಪನೆ. ರಾಮ ಇದ್ದ ಎನ್ನಲು ದಾಖಲೆಯೇ ಇಲ್ಲ ಎಂದು ನ್ಯಾಯಾಲಯದಲ್ಲಿ ಕಾಂಗ್ರೆಸ್ನವರು ವಾದ ಮಾಡಿದ್ದರು ಟೀಕಿಸಿದರು.
ಯಾರ ಭೇಟಿಗೂ ಹೋಗಿಲ್ಲ:ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಶಾಸಕ ಯತ್ನಾಳ, ನಾನು ಯಾರ ಭೇಟಿಗೂ ಹೋಗಿಲ್ಲ. ಯಾರ ಅಪಾಯಿಂಟ್ಮೆಂಟ್ ಕೇಳಿಲ್ಲ. ನನಗೆ ಅಪಾಯಿಂಟ್ಮೆಂಟ್ ಪಡೆಯುವ ಅವಶ್ಯಕತೆಯೂ ಇಲ್ಲ. ನನ್ನ ವೈಯಕ್ತಿಕ ಕೆಲಸಕ್ಕೆ ಅಂದರೆ ಕಾರ್ಖಾನೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ನಾನು ಅತ್ಯಂತ ಅಪಮಾನಕಾರಿಯಾಗಿ, ದೈನ್ಯನಾಗಿ ಹೋಗಿಲ್ಲ. ನನಗೆ ಯಾರೂ ಬೈದಿಲ್ಲ. ಗಂಭೀರವಾದ ಎಚ್ಚರಿಕೆಯನ್ನೂ ಕೊಟ್ಟಿಲ್ಲ. ಸುಮ್ನೆ ನೀವು ಹೊಡೆಯುತ್ತ ಕೂರುತ್ತೀರಿ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.