ಸಾರಾಂಶ
ಆ.15ರ ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಭಾಷಣ
ಕನ್ನಡಪ್ರಭ ವಾರ್ತೆ ಮೈಸೂರು
ಒಕ್ಕಲಿಗ ಉದ್ಯಮಿಗಳ ವೇದಿಕೆಯಾದ ಫರ್ಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಆ.14 ಮತ್ತು 15 ರಂದು ನಗರದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಉದ್ಯಮಿ ಒಕ್ಕಲಿಗ- ವಾರ್ಷಿಕ ಪ್ರತಿನಿಧಿಗಳ ಹಾಗೂ ಹೂಡಿಕೆದಾರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಫರ್ಸ್ ಸರ್ಕಲ್ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ ತಿಳಿಸಿದರು.ಆ.14ರ ಬೆಳಗ್ಗೆ 9ಕ್ಕೆ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನ ಉದ್ಘಾಟಿಸಲಾಗುವುದು. ಆ.15ರ ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಭಾಷಣ ಮಾಡುವರು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅಧ್ಯಕ್ಷತೆ ವಹಿಸುವರು ಎಂದು ಅವರು ಮಂಗಳವಾರ ಹೇಳಿದರು.
ಈ ಸಮಾವೇಶದಲ್ಲಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಒಕ್ಕಲಿಗ ಉದ್ಯಮಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರೊಡನೆ 50 ಹೆಚ್ಚು ಉದ್ಯಮಗಳಿಗೆ ಲಾಭದಾಯಕ ಹೂಡಿಕೆಗೆ ಅವಕಾಶ ದೊರೆಯಲಿದೆ. ಉದ್ಯಮಿಗಳಾಗೋಣ, ಉದ್ಯಮಗಳನ್ನು ಬೆಳೆಸೋಣ, ಕರ್ನಾಟಕದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸೋಣ ಎಂಬುದು ಈ ಬಾರಿಯ ಸಮಾವೇಶದ ವಿಷಯವಾಗಿದೆ ಎಂದರು.ಪದಾಧಿಕಾರಿಗಳಾದ ಯಶವಂತ್, ಚೇತನ್ ಗೌಡ, ಕಾರ್ತಿಕ್, ಕುಮಾರ್, ಮಂಜುಳಾ ಪ್ರಕಾಶ್, ಅನು ಉದಯ್, ಭಾರತೀ ಶಂಕರ್ ಇದ್ದರು.