ಸಾರಾಂಶ
ಶರಾವತಿ ಹಿನ್ನೀರಿನಲ್ಲಿ 57 ಲಕ್ಷ ಮೀನುಮರಿಯನ್ನು ಬಿತ್ತನೆ ಮಾಡಲಾಗಿದ್ದು, ಹಸಿರುಮಕ್ಕಿ, ತಲಕಳಲೆ, ಹೊಸನಗರ ಭಾಗದಲ್ಲಿ ಅತಿಹೆಚ್ಚು ಮೀನುಮರಿ ಬಿತ್ತನೆ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ : ಶರಾವತಿ ಹಿನ್ನೀರಿನಲ್ಲಿ 57 ಲಕ್ಷ ಮೀನುಮರಿಯನ್ನು ಬಿತ್ತನೆ ಮಾಡಲಾಗಿದ್ದು, ಹಸಿರುಮಕ್ಕಿ, ತಲಕಳಲೆ, ಹೊಸನಗರ ಭಾಗದಲ್ಲಿ ಅತಿಹೆಚ್ಚು ಮೀನುಮರಿ ಬಿತ್ತನೆ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಹಸಿರುಮಕ್ಕಿ ಶರಾವತಿ ಹಿನ್ನೀರಿನಲ್ಲಿ ಶನಿವಾರ ಮೀನುಗಾರಿಕೆ ಇಲಾಖೆಯಿಂದ 57 ಲಕ್ಷ ಮೀನುಮರಿ ಬಿತ್ತನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯದಲ್ಲಿಯೇ ಅಂಬ್ಲಿಗೊಳ ಡ್ಯಾಂ ನಲ್ಲಿ ಮೀನುಮರಿ ಬಿತ್ತನೆ ಮಾಡಲಾಗುತ್ತದೆ ಎಂದರು.
ಎರಡು ವರ್ಷಗಳ ಹಿಂದೆ ಮಳೆ ಕಡಿಮೆಯಾಗಿ ಮೀನಿನ ಸಂತತಿ ಕಡಿಮೆಯಾಗಿತ್ತು. ಈ ವರ್ಷ ಉತ್ತಮ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಮರಿಗಳನ್ನು ಬಿಟ್ಟು ಸಂರಕ್ಷಣೆ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಮೀನುಗಾರರು ಸಣ್ಣಪುಟ್ಟ ಮರಿಯನ್ನು ಹಿಡಿಯದೆ ಬಲಿತ ಮೀನನ್ನು ಮಾತ್ರ ಹಿಡಿಯುವ ಮೂಲಕ ಮೀನಿನ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಮೀನುಗಾರಿಕೆ ನಂಬಿಕೊಂಡ ಕುಟುಂಬಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಮೀನುಗಾರಿಕೆಗೆ ಬೇಕಾದ ಸಲಕರಣೆಗಳನ್ನು ಪೂರೈಕೆ ಮಾಡಲಾಗಿದೆ. ಮೀನುಗಾರರಿಂದ ಇನ್ನಷ್ಟು ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈಡೇರಿಸಲಾಗುತ್ತದೆ. ಮೀನುಗಾರರ ಬದುಕು ಹಸನಾಗಿಸಲು ಅಗತ್ಯ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಕಾಗೋಡು ತಿಮ್ಮಪ್ಪನವರು ಅನುದಾನ ಬಿಡುಗಡೆ ಮಾಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇತುವೆ ಕಾಮಗಾರಿ ಪ್ರಗತಿಯಾಗಿಲ್ಲ. ಶಾಸಕನಾದ ಮೇಲೆ ಸಚಿವರ ಜೊತೆ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿಸಿದ್ದೇನೆ. ಇನ್ನೂ ಮೂರು ಫಿಲ್ಲರ್ ಆದರೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ವೇಳೆ ಆಪ್ಸ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ, ಕೋಳೂರು ಗ್ರಾಪಂ ಅಧ್ಯಕ್ಷ ನವೀನ್ ಗೌಡ, ಕಲಸೆ ಚಂದ್ರಪ್ಪ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.