ಸಾರಾಂಶ
ಪ್ರಸಕ್ತ ವರ್ಷದಲ್ಲಿ ಕೊಪ್ಪಳದಲ್ಲಿ 1500 ಸೈಬರ್ ಕ್ರೈಂಗಳು ನೋಂದಣಿಯಾಗಿವೆ.
ತರಬೇತಿ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸಲಹೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಂತರ್ಜಾಲದಲ್ಲಿ ಅತಿ ಹೆಚ್ಚು ಮೋಸ ವಂಚನೆ ಒಳಗಾಗುತ್ತಿರುವವರು ಅಕ್ಷರಸ್ಥರೇ ಹೊರತು ಅನಕ್ಷರಸ್ಥರಲ್ಲ. ಹೀಗಾಗಿ ಸೈಬರ್ ಕ್ರೈಂನಿಂದ ತಪ್ಪಿಸಿಕೊಳ್ಳಬೇಕಾದರೆ ಕನ್ನಡದಲ್ಲಿ ಮಾತಾಡಿ ಎಂದು ಡಿವೈಎಸ್ಪಿ ಯಶವಂತ ಕುಮಾರ್ ಸಲಹೆ ನೀಡಿದರು.ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ನಡೆದ ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತೀಯ ಕಚೇರಿಯ ವತಿಯಿಂದ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರಿಗೆ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ ಕೊಪ್ಪಳದಲ್ಲಿ 1500 ಸೈಬರ್ ಕ್ರೈಂಗಳು ನೋಂದಣಿಯಾಗಿವೆ. ಮೊಬೈಲ್ ಬ್ಯಾಂಕಿಂಗ್, ಲೋನ್ ಆಫರ್, ಟೂರ್ ಪ್ಯಾಕೆಜ್ ಆಫರ್, ಷೇರ್ ಮಾರ್ಕೆಟಿಂಗ್, ನಕಲಿ ಅಪ್ಲಿಕೇಶನ್, ನಕಲಿ ಆ್ಯಪ್, ಇತರ ಸೋಶಿಯಲ್ ಮೀಡಿಯಾಗಳನ್ನ ಸರಿಯಾದ ಮಾಹಿತಿ ಇಲ್ಲದೆ ಬಳಕೆ ಮಾಡಿದರೇ ವಂಚನೆಗೆ ಒಳಗಾಗುತ್ತೇವೆ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಇರಬೇಕು. ವಂಚನೆಗೆ ಒಳಗದವರು ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ನಿಮ್ಮ ದೂರನ್ನು ನೋಂದಣಿ ಮಾಡಿಕೊಂಡರೆ ಸಾಧ್ಯವಾದಷ್ಟು ಪರಿಹಾರ ಸಿಗಬಹುದು ಎಂದರು.ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಶ್ರೀಧರ್ ಕೆಸರಟ್ಟಿ ವಹಿಸಿ ಸೌಹಾರ್ದ ಸಹಕಾರಿ ಚಳವಳಿ ಕುರಿತು ಮಾತನಾಡಿದರು.
ನಂತರ ಡಿಜಿಟಲ್ ಬ್ಯಾಂಕಿಂಗ್ ಕುರಿತು ಉಪನ್ಯಾಸಕ ಡಾ. ಸಾತ್ವಿಕ ಮಾಹಿತಿ ನೀಡಿದರು. ಸಾಲ ವಸೂಲಾತಿ ಕುರಿತು ಪಂಚಾಯಿತಿ ಅಧಿಕಾರಿಗಳಾದ ಚಂದ್ರಶೇಖರಯ್ಯ, ನವೀನ್ ಉಪನ್ಯಾಸ ನೀಡಿದರು. ವಾರ್ಷಿಕ ಸಾಮಾನ್ಯ ಸಭೆಯ ನಂತರ ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ಪ್ರಾಂತಿಯ ಅಧಿಕಾರಿ ಸೂರ್ಯಕಾಂತ ರಾಕ್ಲೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಕಡ್ಡಿಪುಡಿ, ಉಪಾಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ನಿರ್ದೇಶಕರಾದ ಶಂಕರಗೌಡ ಹಿರೇಗೌಡ, ಮುದ್ದಪ್ಪ ಬೇವಿನಹಳ್ಳಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ನಾಗರಾಜ್ ನಾಗನೂರ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ ಮತ್ತು ತಾಲೂಕಿನ ಸೌಹಾರ್ದ ಸಹಕಾರಿಗಳ ನೂರಾರು ಮುಖ್ಯಕಾರ್ಯನಿರ್ವಾಹಕರು ಭಾಗಿಯಾಗಿದ್ದರು.