ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಪೊಲೀಸ್ ತನಿಖೆಗೆ ಮುನ್ನವೇ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಧಾನ ಸೂತ್ರಧಾರ ಸಹೋದರನೊಂದಿಗೆ ಮಾತನಾಡಿ, ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಯು.ಟಿ.ಖಾದರ್ ಅವರು ತಕ್ಷಣ ರಾಜಿನಾಮೆ ನೀಡಬೇಕು. ಈ ಮೂಲಕ ಸ್ಪೀಕರ್ ಕುರ್ಚಿಯ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ. ಇತ್ತ ತನಿಖೆಯ ವರದಿಯಲ್ಲಿ ಫಾಜಲ್ ಸಹೋದರನ ಭಾಗಿಯಾಗಿದ್ದಾನೆ ಎಂದು ಗೃಹ ಸಚಿವರು, ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಫಾಸಿಲ್ ಮನೆಯವರು ಅಥವಾ ಕುಟುಂಬಸ್ಥರು ಯಾರೂ ಕೂಡ ಈ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮಕ್ಕೆ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ ನೀಡಿದ್ದು ಹೇಗೆ? ಫಾಝಿಲ್ ಅವರ ಸಹೋದರ ಜತೆ ಮಾತಾಡಿದ್ದೇನೆ ಎಂದು ಸ್ವತಃ ಖಾದರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪೊಲೀಸರ ವಶದಲ್ಲಿರುವಾಗ ಮಾತನಾಡಿದ್ದು ಹೇಗೆ, ಪೊಲೀಸರು ಆರೋಪಿಗಳ ಜತೆ ಮಾತನಾಡಲು ಅವಕಾಶ ಕಲ್ಪಿಸಿದ್ದು ಹೇಗೆ, ಆರೋಪಿಗಳನ್ನು ರಕ್ಷಿಸಲು ಸ್ಪೀಕರ್ ಅವರು ಮದ್ಯ ಪ್ರವೇಶಿಸಿ ತನಿಖೆಯ ದಿಕ್ಕು ತಪ್ಪಿಸುವ ಕುತಂತ್ರ ಮಾಡುತ್ತಿದ್ದಾರೆಯೆ? ಈ ಕೇಸಿನಲ್ಲಿ ಸ್ಪೀಕರ್ ಅವರ ಪಾತ್ರ ಕುರಿತು ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಷ್ಪಕ್ಷ ಪಾತ ತನಿಖೆಗೆ ಸ್ಪೀಕರ್ ಅವರು ರಾಜಿನಾಮೆ ನೀಡುವುದು ಅಗತ್ಯ ಎಂದು ಹೇಳಿದ್ದಾರೆ.