ಸಾರಾಂಶ
ನೇಜಾರು ಸ್ಪಂದನ ವಿಶೇಷ ಶಾಲೆಯಲ್ಲಿ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ವತಿಯಿಂದ ಸರ್ವಧರ್ಮ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಲ್ಪೆ
ವಿಶೇಷ ಮಕ್ಕಳು ಎಂದಿಗೂ ಹೊರೆಯಲ್ಲ, ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ ಅವರೂ ಕೂಡ ಸಮಾಜದ ಆಸ್ತಿಯಾಗಿಸಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲದಯ ಧರ್ಮಗುರು ಡೆನಿಸ್ ಡೆಸಾ ಹೇಳಿದರು.ಅವರು ಗುರುವಾರ ಇಲ್ಲಿನ ನೇಜಾರು ಸ್ಪಂದನ ವಿಶೇಷ ಶಾಲೆಯಲ್ಲಿ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಬಾಹ್ಯ ಆಡಂಬರದ ಆಚರಣೆಗಿಂತ ಇವತ್ತಿನ ಆಚರಣೆ ಬಲು ಅರ್ಥಪೂರ್ಣ. ಇಲ್ಲಿ ಸೇವೆ ನೀಡುವ ಉಮೇಶ್ ಹಾಗೂ ತಂಡದವರ ಕೆಲಸ ತುಂಬಾ ಶ್ಲಾಘನೀಯ ಎಂದರು.ಇದೇ ವೇಳೆ ಸಮಿತಿಯ ವತಿಯಿಂದ ಸ್ಪಂದನಾ ಸಂಸ್ಥೆಗೆ 10 ಸಾವಿರ ರು. ಮೌಲ್ಯದ ದಿನಸಿ ವಸ್ತಗಳನ್ನು ಜೊತೆಗೆ ಹತ್ತು ಸಾವಿರ ರು. ನಗದು ಹಣವನ್ನು ನೀಡಲಾಯಿತು. ವಿಶೇಷ ಮಕ್ಕಳಿಗಾಗಿ ಮನೋರಂಜನೆಯ ಆಟಗಳನ್ನು ಸಿಸ್ಟರ್ ಸುಶ್ಮಾ ನಡೆಸಿದರು.ಕಾರ್ಯಕ್ರಮದಲ್ಲಿ ಸಮನ್ವಯ ಸಮಿತಿಯ ಉಪಾಧ್ಯಕ್ಷ ಆಗ್ನೆಲ್ ಫರ್ನಾಂಡಿಸ್, ಶಬೀರ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ತೊಟ್ಟಂ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸುಶ್ಮಾ, ಸಿಸ್ಟರ್ ಪ್ರೀಯಾ, ಸಿ ಮರೀನಾ, ವನಿತಾ ಫರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು. ಲೆಸ್ಲಿ ಲವೀನಾ ಆರೋಝಾ ಪ್ರಾರ್ಥನೆ ನೆರವೇರಿಸಿದರೆ, ಸ್ವಂದನ ಮ್ಯಾನೆಜಿಂಗ್ ಟ್ರಸ್ಟಿ ಉಮೇಶ್ ಸ್ವಾಗತಿಸಿದರು. ಲೆಸ್ಲಿ ಆರೋಜಾ ಧನ್ಯವಾದವಿತ್ತರು.