ಸಾರಾಂಶ
ಮೇ.೨೨ ರಂದು ಶ್ರೀನರಸಿಂಹ ಜಯಂತಿ ಅಂಗವಾಗಿ ವಿಶೇಷ ಹವನ, ಹೋಮಗಳು ಹಾಗೂ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಎರ್ಪಡಿಸಲಾಗಿದೆ ಎಂದು ಪರಂಪರಾ ಅವಧೂತ ಸತೀಶ್ ಶರ್ಮ ಗೂರೂಜಿ ತಿಳಿಸಿದರು. ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಹಾಸನ ರಸ್ತೆ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟ್ಯತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಅಧಿದೇವತೆ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಮೇ.೨೨ ರಂದು ಶ್ರೀನರಸಿಂಹ ಜಯಂತಿ ಅಂಗವಾಗಿ ವಿಶೇಷ ಹವನ, ಹೋಮಗಳು ಹಾಗೂ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಎರ್ಪಡಿಸಲಾಗಿದೆ ಎಂದು ಪರಂಪರಾ ಅವಧೂತ ಸತೀಶ್ ಶರ್ಮ ಗೂರೂಜಿ ತಿಳಿಸಿದರು.ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟ್ಯತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಅಧಿದೇವತೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಕ್ಷೇತ್ರಪಾಲಕ ಶ್ರೀ ಪಂಚಮುಖಿ ಆಂಜನೇಯಸ್ವಾಮಿ, ಶ್ರೀ ಪಂಚಮುಖಿ ಗಣಪತಿ, ಶ್ರೀ ಕಂಠೇಶ್ವರ, ಶ್ರೀ ಅಂಬಿಕಾ ಪರಮೇಶ್ವರಿ, ಸೂರ್ಯದೇವರ ದೇವಾಲಯಗಳ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭವನ್ನು ಹರಿಹರಪುರದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯದಲ್ಲಿ ಕಳೆದ ತಿಂಗಳು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಪೂರ್ಣ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಲು ಸಹಕರಿಸಿರುವ ಭಕ್ತರೆಲ್ಲರಿಗೂ ಭಗವಂತ ಕೃಪಾಶೀರ್ವಾದ ಕರುಣಿಸಲಿ ಎಂದು ಹಾರೈಸಿದರು.
ಮೇ ೨೨ ರಂದು ಬುಧವಾರ ಬೆಳಿಗ್ಗೆ ಶ್ರೀನರಸಿಂಹ ಸ್ವಾಮಿ ಜಯಂತಿ ಪ್ರಯುಕ್ತ ವಿಷ್ಣು ಪಂಚಾಯತನ ದೇವಾಲಯಗಳಲ್ಲಿ ವಿಶೇಷ ಹವನ, ಹೋಮಗಳು ಶ್ರೀಲಕ್ಷ್ಮೀ ನರಸಿಂಹ ಮೂಲ ಮಂತ್ರ ಹೋಮ, ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ಶ್ರೀಗಳಿಗೆ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗುವುದು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಎರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಶ್ರೀಕ್ಷೇತ್ರದ ಆಡಳಿತಾಧಿಕಾರಿಗಳಾದ ಬಿ.ಎಸ್.ಸೇತುರಾಮ್, ಶ್ರೀವಿದ್ಯಾನಗರ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ಪುರುಷೊತ್ತಮ್, ಅವಧೂತ ಶಿಷ್ಯ ಬಳಗದ ಮಂಜುನಾಥ್, ಇತರರು ಇದ್ದರು.