ಸಾರಾಂಶ
ಧಾರವಾಡ:
ಸುಪ್ರೀಂಕೋರ್ಟ್ನಲ್ಲಿ ವಿವಿಧ ಪ್ರಕರಣಗಳನ್ನು ವಿಶೇಷ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಜು. 29ರಿಂದ ಆ. 3ರ ವರೆಗೆ ರಾಷ್ಟ್ರೀಯ ಲೋಕ್ ಅದಾಲತ್ ನಡೆಸುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಮಾಹಿತಿ ನೀಡಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲಾ ವ್ಯಾಪ್ತಿಯ ಕಕ್ಷಿದಾರರು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿ ಸುಪ್ರೀಂಕೋರ್ಟ್ನಲ್ಲಿರುವ ತಮ್ಮ ಪ್ರಕರಣ ರಾಜಿ ಮಾಡಿಕೊಳ್ಳಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಕಕ್ಷಿದಾರರಿಗೆ ಮಾಹಿತಿ, ನೋಟಿಸ್ ನೀಡಲು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಸೋಮಶೇಖರ ಅವರು ನಿರ್ದೇಶನ ನೀಡಿದ್ದು, ಅದರಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಹೊಂದಿದವರಿಗೆ ವಿಶೇಷ ಜನತಾ ನ್ಯಾಯಾಲಯದಲ್ಲಿ ಭಾಗವಹಿಸಿ, ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದಲ್ಲಿ ಉಚಿತವಾಗಿ ವಿಡಿಯೋ ಕಾನ್ಫೆರೆನ್ಸ್ ಮತ್ತು ಇತರ ಅನುಕೂಲ ಮಾಡಿಕೊಡಲಾಗುವುದು. ಇದರಿಂದ ಬಡ ಮತ್ತು ರಾಜಿ ಅಗತ್ಯವಿರುವ ಕಕ್ಷಿಗಾರರಿಗೆ ಸಹಾಯವಾಗುತ್ತದೆ ಎಂದು ಹೇಳಿದರು.ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು 2023ರ ಡಿ. 9ರಂದು ನಡೆಸಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜಿ ಆಗಬಹುದಾದ 17,581 ಪ್ರಕರಣಗಳ ಪೈಕಿ 12,827 ಹಾಗೂ 75,091 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 74,419 ಸೇರಿ ಒಟ್ಟು 87,246 ಪ್ರಕರಣ ರಾಜಿ ಸಂಧಾನ ಮಾಡಿಸಲಾಗಿದೆ. ಹಾಗೆಯೇ 2024ರ ಮಾ. 16ರಂದು ಜರುಗಿದ ಅದಾಲತ್ನಲ್ಲಿ 66,296 ಪೂರ್ವ ವಾಜ್ಯ ಪ್ರಕರಣ ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ 13,284 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರುಶುರಾಮ ದೊಡ್ಡಮನಿ ಇದ್ದರು.