ಹನುಮ ಜಯಂತಿ ಅಂಗವಾಗಿ ಮಂಡ್ಯ ಜಿಲ್ಲೆಯ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು.

ನಗರದ ನಾಡಪ್ರಭು ಕೆಂಪೇಗೌಡ ಉದ್ಯಾನದ ಶ್ರೀವೀರಾಂಜನೇಯಸ್ವಾಮಿ ದೇವಾಲಯ, ಗಾಂಧಿ ಉದ್ಯಾನ, ಕಲ್ಲಹಳ್ಳಿ ಬಡಾವಣೆಯ ಆಂಜನೇಯಸ್ವಾಮಿ, ಚಾಮುಂಡೇಶ್ವರಿನಗರದ ಶ್ರೀಆಭಯ ಆಂಜನೇಯಸ್ವಾಮಿ, ಸ್ವರ್ಣಸಂದ್ರ ಬಡಾವಣೆಯ ಶ್ರೀ ಆಂಜನೇಯಸ್ವಾಮಿ, ಅಶೋಕನಗರದ ಜಿಲ್ಲಾ ಆಸ್ಪತ್ರೆ ರಸ್ತೆ, ನೆಹರುನಗರದ ಶ್ರೀರಾಮ ಮಂದಿರ, ಗಾಂಧಿನಗರದ ಶ್ರೀ ರಾಮ ಮಂದಿರ, ಮದ್ದೂರು ಶ್ರೀಹೊಳೆ ಆಂಜನೇಯಸ್ವಾಮಿ, ಹೊಳಲು ಗ್ರಾಮದ ಶ್ರೀ ಆಂಜನೇಯಸ್ವಾಮಿ, ಯಲಿಯೂರು ಶ್ರೀ ಆಂಜನೇಯಸ್ವಾಮಿ ದೇವಾಲಯ, ಮಳವಳ್ಳಿ ತಾಲೂಕಿನ ಮುತ್ತತ್ತಿಯ ಶ್ರೀ ಮುತ್ತೆತ್ತರಾಯಸ್ವಾಮಿ ದೇಗುಲ ಸೇರಿದಂತೆ ಜಿಲ್ಲೆಯ ಎಲ್ಲಾ ಹನುಮ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್‍ಯಗಳು ನಡೆದವು.

ಕಳೆದ 40 ವರ್ಷಗಳಿಂದ ನಿರಂತರವಾಗಿ ಹನುಮ ಜಯಂತಿ ಆಚರಿಸುತ್ತಿರುವ ರೈಲು ನಿಲ್ದಾಣ ಬಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತಮಂಡಳಿ ಅಧ್ಯಕ್ಷ ಅಶೋಕ್, ಅರ್ಚಕ ಶಿವರುದ್ರಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್‌ಮೂರ್ತಿ, ಗೋಪಿ, ಮೂರ್ತಿ, ಕುಮಾರ್, ಹೊಸಹಳ್ಳಿ ಶಿವು ಮತ್ತಿತರು ಅನ್ನಸಂತರ್ಪಣೆ ನೆರವೇರಿಸಿದರು.

ಮದ್ದೂರಿನ ಪಟ್ಟಾಭಿರಾಮ ದೇವಸ್ಥಾನ, ಮಳವಳ್ಳಿಯ ಶ್ರೀ ರಾಮಮಂದಿರ, ಶ್ರೀರಂಗಪಟ್ಟಣದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯ, ಪಾಂಡವಪುರದ ಶ್ರೀ ರಾಮಮಂದಿರ, ಕೆ.ಆರ್. ಪೇಟೆಯ ಶ್ರೀ ಬೃಂದಾವನ ಆಂಜನೇಯಸ್ವಾಮಿ ದೇವಸ್ಥಾನ, ನಾಗಮಂಗಲದ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಪ್ರಸಾದ ವಿನಿಯೋಗ ಕಾರ್‍ಯಕ್ರಮ ಏರ್ಪಡಿಸಲಾಗಿತ್ತು.

ಬೆಳಗ್ಗೆ 5 ಗಂಟೆಗೆ ಗಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಶ್ರೀ ಸೀತಾರಾಮಚಂದ್ರ ಸಹಿತ ಪವಮಾನ ಹೋಮ, ಅಷ್ಟಾವಧಾನ ಸೇವೆ, ಪಂಚಾಮೃತ ಸೇವೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಬೆಳಗ್ಗೆ 12 ಗಂಟೆಯಿಂದಲೇ ದೇವಸ್ಥಾನದ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲೂಕುಗಳಲ್ಲಿ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀರಾಮ ದೇವಾಲಯಗಳಲ್ಲಿ ಪೂಜಾ ಕಾರ್‍ಯ ನಡೆಸಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಹನುಮ ಜಯಂತಿ ಪೂಜೆ, ಬೆಣ್ಣೆ ಅಲಂಕಾರ

ಶ್ರೀರಂಗಪಟ್ಟಣ: ಹನುಮ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಪಟ್ಟಣದ ಮೂಡಲ ಆಂಜನೇಯ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿದರು.

ತಾಲೂಕಿನ ಬೆಳಗೊಳ ಗ್ರಾಮದ ಆಂಜನೇಯ, ಮರಳಗಾಲದ ಮತ್ಸ್ಯ ಹನುಮನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಗಂಜಾಂನ ಕುರಾದ್ ಬೀದಿಯಲ್ಲಿ ಹನುಮ ಭಕ್ತರು ಮುಖ್ಯ ಬೀದಿಯಲ್ಲಿ ಹನುಮದೇವರ ಭಾವಚಿತ್ರ ಇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ರಾಸಾಯನ, ಮೊಸರು ಅನ್ನ ಸಂತರ್ಪಣೆ ನಡೆಯಿತು.