ಬಾದಾಮಿ ಅಮಾವಾಸ್ಯೆ ಮಾದೇಶ್ವರನಿಗೆ ವಿಶೇಷ ಪೂಜೆ

| Published : May 26 2025, 01:20 AM IST

ಸಾರಾಂಶ

ಹನೂರು ಮಲೆಮಾದೇಶ್ವರ ಬೆಟ್ಟದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ವಿವಿಧ ಉತ್ಸವಗಳು ಧಾರ್ಮಿಕವಾಗಿ ಸಂಭ್ರಮ ಸಡಗರದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳು ಬೇಡಗಂಪಣ ಸಮುದಾಯದ ಅರ್ಚಕರಿಂದ ಸಂಭ್ರಮ ಸಡಗರದಿಂದ ಜರುಗಿತು.ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಬೇಡಗಂಪಣ ಅರ್ಚಕರ ತಂಡದವರಿಂದ ಮಲೆ ಮಾದೇಶ್ವರನಿಗೆ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ಭಾನುವಾರ ಬೆಳಗಿನ ಜಾವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮಹಾಮಂಗಳಾರತಿಯೊಂದಿಗೆ ನಡೆಯಿತು.

ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮ ಪ್ರಯುಕ್ತ ಬೆಳಗ್ಗೆ 8 ಸಮಯದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಬಸವ ವಾಹನ ಹುಲಿ ವಾಹನ ಮತ್ತು ರುದ್ರಾಕ್ಷಿ ಮಂಟಪೋತ್ಸವ, ಪಂಜಿನ ಸೇವೆ, ಉರುಳು ಸೇವೆ, ಮುಡಿಸೇವೆ ಹರಕೆ ಹೊತ್ತ ಭಕ್ತರು ದೇವಾಲಯದ ಮುಂಭಾಗ ಧೂಪಹಾಕಿ ಸರದಿ ಸಾಲಿನಲ್ಲಿ ನಿಂತು ಮಲೆಮಹದೇಶ್ವರನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ನಿವೇದನೆ ಮಾಡಿಕೊಂಡರು.

ಅಲಂಬಡಿ ಬಸವನಿಗೆ ವಿಶೇಷ ಪೂಜೆ:

ಅಮಾವಾಸ್ಯೆ ಪ್ರಯುಕ್ತ ಮಲೆಮಾದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತಾದಿಗಳು ದೇವಾಲಯದ ಪಕ್ಕದಲ್ಲಿರುವ ಆಲಂಬಡಿ ಬಸವನಿಗೆ ಎಣ್ಣೆ ಅಭಿಷೇಕ, ಹಾಲಾಭಿಷೇಕ ಪೂಜೆ ಸಲ್ಲಿಸಿದರು. ಸರಥಿ ಸಾಲಿನಲ್ಲಿ ನಿಂತು ದಾಸೋಹ ಭವನದಲ್ಲಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೆರೆದಿದ್ದ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಕ್ತ ಸಮೂಹ:

ಬಾದಾಮಿ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಸಹ ಅಪಾರ ಸಂಖ್ಯೆಯ ಭಕ್ತಾದಿಗಳು ಪೂಜೆಗೆ ಬಂದಿದ್ದರು. ಮಲೆ ಮಾದೇಶ್ವರನ ದರ್ಶನ ಪಡೆದು ಜೈಕಾರಗಳನ್ನು ಕೂಗಿ ಸಂಭ್ರಮಸಿದರು.

ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ:

ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆಮಾದೇಶ್ವರನ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಬರುವ ಹಿರಿಯರಿಗೆ ಬ್ಯಾಟರಿ ಚಾಲಿತ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದೇವರ ದರ್ಶನ ಪಡೆದು ಹೋಗುವವರೆಗೂ ಅಧಿಕಾರಿಯ ಸಿಬ್ಬಂದಿ ಜೊತೆಯಲ್ಲಿ ಇದ್ದು ಮುಕ್ತ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.