ಸಾರಾಂಶ
ಕನಕಗಿರಿ: ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಲಶಕ್ಕೆ ಪಟ್ಟಣದ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ಜ.೨೨ರ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಭಾಗವಾಗಿ ದೇಶದ ಎಲ್ಲ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಗ್ರಾಮಕ್ಕೂ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಡಿ.೩೧ರಿಂದ ಜ.೧೫ರವರೆಗೆ ನಡೆಯಲಿದೆ. ಈ ಮಹತ್ಕಾರ್ಯ ೧೫ ದಿನಗಳ ಕಾಲ ನಡೆಯಲಿದೆ. ಸೇವಾ ಕಾರ್ಯದಲ್ಲಿ ಶ್ರೀರಾಮ, ಹನುಮಂತನ ಭಕ್ತರನ್ನು ಸೇರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡುವ ಮುಖೇನ ಪ್ರತಿ ಮನೆ-ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸುವ ಕುರಿತು ಈಗಾಗಲೇ ಹಲವು ಸಭೆಗಳಾಗಿವೆ ಎಂದು ತಿಳಿಸಿದರು.ಇದಕ್ಕೂ ಮೊದಲು ಭಕ್ತರಿಂದ ಶ್ರೀರಾಮ, ಸೀತಾ, ಲಕ್ಷ್ಮಣರ ಜಪ ಹಾಗೂ ಸಾಮೂಹಿಕ ಹನುಮಾನ ಚಾಲೀಸ್ ಪಠಣ ಮಾಡಲಾಯಿತು. ಇನ್ನು ಮಂತ್ರಾಕ್ಷತೆ ಕಲಶಕ್ಕೆ ತೊಂಡಿತೇವರಪ್ಪ, ಕರಡಿಗುಡ್ಡದ ಆಂಜನೇಯ, ಅಗಸಿ ಹನುಮಪ್ಪ, ಗಿಡ್ಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು.ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಅರ್ಚಕರಾದ ವಿ.ದೇಶಿಕಾಚಾರ್ಯ, ಹನುಮಂತಪ್ಪ ಪೂಜಾರ, ಪ್ರಮುಖರಾದ ಹನುಮಂತರೆಡ್ಡಿ ಮಹಲಿನಮನಿ, ಶ್ರೀನಿವಾಸರೆಡ್ಡಿ ಓಣಿಮನಿ, ಪ್ರಾಣೇಶ ಪೂಜಾರ, ವಿನಯ ಮರಾಠಿ, ಜೀವಣ್ಣ ಮರಾಠಿ, ಹನುಮೇಶ ಡಿಶ್, ದಾಸಪ್ಪ ಗೋಪಾಲರೆಡ್ಡಿ ಓಣಿಮನಿ ಇದ್ದರು.