ಮಠದ ಯಾವುದೇ ಕಾರ್ಯಕ್ರಮಗಳಿಗೆ ಬರಲು ಇಂತಿಷ್ಟು ಹಣ ಕೊಡಬೇಕು ಎನ್ನುವ ಸಂಪ್ರದಾಯ ಆದಿಚುಂಚನಗಿರಿ ಮಠದಲ್ಲಿಲ್ಲ. ದೇವಸ್ಥಾನ ನಿರ್ಮಾಣದಂತಹ ವಿಶೇಷ ಯೋಜನೆಗಳಿಗೆ ಮಾತ್ರ ಭಕ್ತರು ಸ್ವಯಂಪ್ರೇರಣೆಯಿಂದ ಕಾಣಿಕೆ ನೀಡಿದ್ದಾರೆ. ಈ ವರ್ಷದಲ್ಲಿ ಕನಿಷ್ಠ 9 ದಿನಗಳ ಕಾಲ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಭೈರವೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂಬುದು ನಾಥ ಸಂಪ್ರದಾಯದ ಆಶಯವಾಗಿದೆ
ಕನ್ನಡಪ್ರಭ ವಾರ್ತೆ ಮಂಡ್ಯ
ಆಧ್ಯಾತ್ಮ ಮತ್ತು ಸಂಸ್ಕೃತಿ ಶುದ್ಧವಾದ ನೀರಿದ್ದಂತೆ, ಮೌಲ್ಯಾಧಾರಿತ ವ್ಯಕ್ತಿಗಳು ಸಮಾಜದಲ್ಲಿ ಸದಾ ತಿಳಿಯಾದ ನೀರಿನಂತೆ ಇರಬೇಕು ಎಂದು ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಬಂದೀಗೌಡ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಜ್ಞೆ ಎನ್ನುವುದು ಸೂರ್ಯನಿದ್ದಂತೆ. ಮನಸ್ಸು ಮಲೀನಗೊಂಡಾಗ ಮೋಡಗಳು ಸೂರ್ಯನನ್ನು ಮರೆಮಾಚುವಂತೆ ಪ್ರಜ್ಞೆ ಮರೆಯಾಗಬಹುದು, ಆದರೆ, ಶುದ್ಧ ಪ್ರಜ್ಞೆಯೇ ನಮ್ಮ ಸ್ವರೂಪ ಎಂದು ತಿಳಿಸಿದರು.
ಮಠದ ಯಾವುದೇ ಕಾರ್ಯಕ್ರಮಗಳಿಗೆ ಬರಲು ಇಂತಿಷ್ಟು ಹಣ ಕೊಡಬೇಕು ಎನ್ನುವ ಸಂಪ್ರದಾಯ ಆದಿಚುಂಚನಗಿರಿ ಮಠದಲ್ಲಿಲ್ಲ. ದೇವಸ್ಥಾನ ನಿರ್ಮಾಣದಂತಹ ವಿಶೇಷ ಯೋಜನೆಗಳಿಗೆ ಮಾತ್ರ ಭಕ್ತರು ಸ್ವಯಂಪ್ರೇರಣೆಯಿಂದ ಕಾಣಿಕೆ ನೀಡಿದ್ದಾರೆ. ಈ ವರ್ಷದಲ್ಲಿ ಕನಿಷ್ಠ 9 ದಿನಗಳ ಕಾಲ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಭೈರವೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂಬುದು ನಾಥ ಸಂಪ್ರದಾಯದ ಆಶಯವಾಗಿದೆ ಎಂದು ಹೇಳಿದರು.ಸುಮಾರು 1200 ವರ್ಷಗಳ ಇತಿಹಾಸವಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಅದಿದೇವತೆ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನವು ಭಕ್ತರ ಅಭೀಷ್ಠೆಯಂತೆ ಸಿದ್ಧಗೊಂಡಿದೆ. ಮೂರು ದಿನಗಳ ಶಾಸ್ತ್ರೋಕ್ತ ಕಾರ್ಯಕ್ರಮದ ನಂತರ ದೇವಾಲಯ ಲೋಕಾರ್ಪಣೆಗೊಂಡಿದೆ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಪೂಜ್ಯ ಪುರುಷೋತ್ತಮಾನಂದನಾಥ ಸ್ವಾಮೀಜಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳುವವರೆಗೂ ಹಠ ಬಿಡದೆ ನಿಲ್ಲುತ್ತಾರೆ ಎಂಬುದಕ್ಕೆ ಈ ದೇವಾಲಯದ ನಿರ್ಮಾಣವೇ ಸಾಕ್ಷಿ ಎಂದು ಬಣ್ಣಿಸಿದರು.ಬೆಂಗಳೂರಿನ ವಿಜಯನಗರದಲ್ಲಿ 25 ವರ್ಷಗಳ ಹಿಂದೆಯೇ ಹೈಟೆಕ್ ಶಾಲೆ ನಿರ್ಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅವರು ಕಾರಣಕರ್ತರಾಗಿದ್ದಾರೆ. ಕೆಲವು ತಿಂಗಳ ಹಿಂದೆ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ವಿಶ್ರಾಂತಿ ಪಡೆಯದೆ ಈ ದೇವಸ್ಥಾನ ಲೋಕಾರ್ಪಣೆಗಾಗಿ ಶ್ರಮಿಸಿದ್ದಾರೆ. ದೇವಸ್ಥಾನದ ಸಂಕಲ್ಪ ಶಕ್ತಿ ಮತ್ತು ಸ್ವಾಮೀಜಿಯವರ ಛಲಕ್ಕೆ ಇಡೀ ಭಕ್ತ ಸಮೂಹದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.
---------------ಭಕ್ತರಿಗೆ ಪ್ರಸಾದ ಬಡಿಸಿದ ಶ್ರೀಗಳು
ಮಂಡ್ಯ: ಆದಿಚುಂಚನಗಿರಿ ಶ್ರೀಮಠದ ಬಂದೀಗೌಡ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಭೈರವೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಕಳೆದ ಮೂರು ದಿನಗಳಿಂದ ಅನ್ನಸಂತರ್ಪಣೆ ಸೇವಾರ್ಥ ನೆರವೇರಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅವರನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.ಭಕ್ತಾಗಳನ್ನು ಖುದ್ದು ಶ್ರೀಗಳೇ ಭೇಟಿ ಮಾಡಿ ಪ್ರಸಾದ ಬಡಿಸುವ ಮೂಲಕ ಭಕ್ತರಿಗೆ ಆಶೀರ್ವದಿಸಿದರು.