ಕನಕಗಿರಿ: ಇಲ್ಲಿನ ಐತಿಹಾಸಿಕ ಕನಕಾಚಲ ಜಾತ್ರಾಮಹೋತ್ಸವ ನಿಮಿತ್ತ ಶನಿವಾರ ಹನುಮಂತೋತ್ಸವವು ವೈಭವದಿಂದ ನಡೆಯಿತು.

ಜಾತ್ರಾ ಕಾರ್ಯಕ್ರಮಗಳು ಆರಂಭದಿಂದ ಅದ್ಧೂರಿಯಾಗಿ ಜರುಗುತ್ತಿವೆ. ಜಾತ್ರಾಮಹೋತ್ಸವದ ೫ನೇ ದಿನವಾದ ಶನಿವಾರ ಹನುಮಂತೋತ್ಸವವೂ ಅರ್ಥಪೂರ್ಣವಾಗಿ ನಡೆಯಿತು.

ಹನುಮಂತೋತ್ಸವದ ನಿಮಿತ್ತ ದೇವಾಲಯದಲ್ಲಿ ಭಾನುವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮ ನಡೆದವು. ನಂತರ ಮಧ್ಯರಾತ್ರಿ ೧೨ಗಂಟೆ ಸುಮಾರಿಗೆ ಹನುಮಂತ ದೇವರ ಮೂರ್ತಿ ಹೊತ್ತ ಉಚ್ಛಾಯ ಭಕ್ತರು ರಾಜಬೀದಿಯ ಮೂಲಕ ಎದುರು ಹನುಮಪ್ಪ ದೇವಸ್ಥಾನದವರೆಗೆ ಎಳೆದರು.

ಬಳಿಕ ವಿಶೇಷ ಪೂಜೆಯೊಂದಿಗೆ ರಾಜಬೀದಿ ಮಾರ್ಗವಾಗಿ ಕನಕಾಚಲ ದೇವಸ್ಥಾನದ ಸ್ವ-ಸ್ಥಾನಕ್ಕೆ ಮರಳಿತು. ಬೀದಿಯುದ್ದಕ್ಕೂ ನೆರೆದಿದ್ದ ಭಕ್ತರು ಹೂ,ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಥಬೀದಿಗೆ ಧಾವಿಸಿ ಉಚ್ಛಾಯದ ವೈಭವ ಕಣ್ತುಂಬಿಕೊಂಡರು. ಆಕಾಶದೆತ್ತರಕ್ಕೆ ಸಿಡಿಯುವ ಬಣ್ಣದ ಪಟಾಕಿಗಳು ನೋಡುಗರ ಕಣ್ಮನ ಸೆಳೆದವು.

ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಸುದರ್ಶನರೆಡ್ಡಿ, ಕನಕರೆಡ್ಡಿ ಮಹಲಿನಮನಿ,ಶಾಮಸಿಂಗ್ ರಜಪೂತ, ಈರಣ್ಣ ಚಿತ್ರಗಾರ, ರಾಮಕೃಷ್ಣಾರೆಡ್ಡಿ, ಗುಂಡಪ್ಪ ಚಿತ್ರಗಾರ,ನಾಗರಾಜ ಚಿತ್ರಗಾರ, ಉಮೇಶ ಚಿತ್ರಗಾರ, ರಾಘವೇಂದ್ರ ಚಿತ್ರಗಾರ ಸೇರಿದಂತೆ ಸಾವಿರಾರು ಭಕ್ತರು ಇದ್ದರು.


ಚಿತ್ರಗಾರರಿಂದ ಉಚ್ಛಾಯಕ್ಕೆ ಸಿಂಗಾರ!

ತಲೆತಲಾಂತರದಿಂದ ಈ ಜಾತ್ರೆಯಲ್ಲಿನ ನಡೆಯುವ ಉತ್ಸವ,ರಥದ ಗೊಂಬೆಗಳಿಗೆ ಸಿಂಗರಿಸುವುದು ಇಲ್ಲಿನ ಚಿತ್ರಗಾರರು. ಜಾತ್ರೆಯ ೫ನೇ ದಿನ ನಡೆಯುವ ಹನುಮಂತೋತ್ಸವಕ್ಕೆ ಬೆಳಗ್ಗೆಯಿಂದ ರಾತ್ರಿ ೧೨ರ ವರೆಗೂ ಸಿಂಗರಿಸಿ,ಅಲಂಕಾರದಿಂದ ಉಚ್ಛಾಯಕ್ಕೆ ಜೀವ ತುಂಬುವ ಕೆಲಸ ಮಾಡುತ್ತಾರೆ.ಇವರ ಈ ಅದ್ಭುತ ಕಲೆ ನಾಡಿನ ಹೆಸರಾಗಿದ್ದು, ಜಾತ್ರೆಗೆ ಬರುವ ಜನ ಚಿತ್ರಗಾರರ ಕೆಲೆ ನೋಡಿ ಸ್ಮರಿಸುತ್ತಿದ್ದಾರೆ.