ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗ್ರಾಮೀಣ ಭಾಗದಲ್ಲಿ ಆಯೋಜನೆಗೊಳ್ಳುವ ಕ್ರೀಡೆಗಳು ಸಾಮರಸ್ಯಕ್ಕೆ ವೇದಿಕೆಯಾಗಿದ್ದು, ಜಾತಿ, ಮತ, ಪಂಥದ ಭೇದವಿಲ್ಲದೇ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಯಡೂರು ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಅಭಿಪ್ರಾಯಿಸಿದರು.ಸಮೀಪದ ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಯಡೂರಿನ ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿರುವ 26ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯು ಸಕಾರಾತ್ಮಕತೆಯ ಮಾನಸಿಕತೆಯೊಂದಿಗೆ ದೈಹಿಕ ಶಕ್ತಿಯನ್ನು ತುಂಬುತ್ತದೆ. ಹುಮ್ಮಸ್ಸಿನಿಂದ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾಪಟುಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುವ ಬದಲು ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಬೇಕು ಎಂದು ಅಭಿಪ್ರಾಯಿಸಿದರು.ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಕ್ರೀಡೆಯು ಮನುಷ್ಯನ ಜೀವನದ ಭಾಗವಾಗಿದೆ. ಕೊಡಗು ಜಿಲ್ಲೆ ಕ್ರೀಡೆಯ ತವರಾಗಿದ್ದು, ಹಲವಷ್ಟು ಮಂದಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ಮೈದಾನದಿಂದ ಮಕ್ಕಳನ್ನು ಮನೆಗೆ ಕರೆತರಲು ಸಾಹಸ ಪಡುತ್ತಿದ್ದ ಪೋಷಕರು, ಇಂದು ಮಕ್ಕಳನ್ನು ಮೈದಾನಕ್ಕೆ ಕಳುಹಿಸಲು ಸಾಹಸ ಪಡುವಂತಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ಮುಳುಗದೇ ಮೈದಾನಕ್ಕೆ ಬರಬೇಕು. ಸ್ಥಳೀಯವಾಗಿ ಇರುವ ಕ್ರೀಡಾಂಗಣಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.ಸಂಘಟನೆಗಳು ಬೆಳೆಯಲು ಸದಸ್ಯರುಗಳ ಸಹಕಾರ ಮುಖ್ಯ. ಕಳೆದ 26 ವರ್ಷಗಳಿಂದ ವೈಸಿಸಿ ಕ್ಲಬ್ ನಿರಂತರವಾಗಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಯುವ ಜನಾಂಗ ಕ್ರೀಡೆಯಿಂದ ವಿಮುಖರಾಗಬಾರದು. ವಿದ್ಯಾರ್ಥಿಗಳು ಕ್ರೀಡೆಯಿಂದಲೂ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯಿಸಿದರು.ಯಡೂರು ಗ್ರಾಮ ಸಮಿತಿ ಅಧ್ಯಕ್ಷ ವೈ.ಡಿ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಸರ್ಕಾರಿ ನೌಕರ ಸಿ.ಹೆಚ್. ಚಂದ್ರಪ್ಪ, ಉಪನ್ಯಾಸಕ ವಿನೋದ್, ಬೆಳೆಗಾರ ವಿಜಯಕುಮಾರ್, ವೈ.ಪಿ. ಲೋಕೇಶ್, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಮಲ್ಲಪ್ಪ, ಉಪನ್ಯಾಸಕಿ ಸುನೀತಾ, ಕ್ಲಬ್ ಅಧ್ಯಕ್ಷ ಹೆಚ್.ಬಿ. ಕಿರಣ್ ಗೌಡ ಅವರು ಇದ್ದರು.