ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ. ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ. ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅಭಿಪ್ರಾಯಪಟ್ಟರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ದಸರಾ ಕ್ರೀಡಾಕೂಟದಂತಹ ಕ್ರೀಡಾಕೂಟಗಳು ಯುವಕರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿವೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಆರೋಗ್ಯ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಯಲಿದೆ. ಪರಸ್ಪರ ಸಹಕಾರ, ಸ್ನೇಹ ಮತ್ತು ಸಾಮಾಜಿಕ ಬಾಂಧವ್ಯ ಗಟ್ಟಿಗೊಳ್ಳುವಲ್ಲಿಯೂ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಗ್ರಾಮೀಣ ಹಾಗೂ ಪ್ರತಿಭಾವಂತ ಯುವಕರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಕ್ರೀಡಾಕೂಟದಲ್ಲಿ ಅವಕಾಶ ದೊರೆಯಲಿದೆ. ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳು, ಕ್ರೀಡಾ ಕೋಟಾದ ಮೂಲಕ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ದೊರೆಯಲಿವೆ. ಯುವಕರನ್ನು ಮಾದಕ ವ್ಯಸನ, ಅಕ್ರಮ ಚಟುವಟಿಕೆ ಮತ್ತು ಅಸಾಮಾಜಿಕ ಪ್ರವೃತ್ತಿಗಳಿಂದ ದೂರವಿರಿಸಲು ಕ್ರೀಡೆ ಸಹಕಾರಿ. ಅಂತೆಯೇ ಗೆಲುವನ್ನು ವಿನಯದಿಂದ ಸ್ವೀಕರಿಸುವುದು ಮತ್ತು ಸೋಲಿನಿಂದ ಪಾಠ ಕಲಿಯುವ ಗುಣ ಬೆಳೆಸುವುದರ ಜತೆಗೆ ಸಮಗ್ರ ವ್ಯಕ್ತಿತ್ವ ವಿಕಸನಗೊಳ್ಳಲಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹೇಳಿದರು.
ಅತಿ ಹೆಚ್ಚಿನ ಪ್ರತಿಭಾವಂತರು, ಸಾಧಕರು ಜಿಲ್ಲೆಯಲ್ಲಿದ್ದಾರೆ. ನಾವೆಲ್ಲರೂ ಗಮನಿಸಿದಂತೆ ಓಲಂಪಿಕ್ಸ್ನಂತಹ ಕ್ರೀಡೆಗಳಲ್ಲಿ ದೇಶದ ಪ್ರತಿಭೆಗಳು ನಿರೀಕ್ಷೆ ಪ್ರಮಾಣದಲ್ಲಿ ಕಾಣದಿರುವುದು ಬೇಸರದ ಸಂಗತಿ. ಮಲೆನಾಡ ಯುವ ಕ್ರೀಡಾಪಟುಗಳು ಇಂತಹ ಮಹತ್ವದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಯತ್ನಿಸಬೇಕು ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್, ಮೇರಾ ಭಾರತ್ ಸಂಸ್ಥೆಯ ಯುವ ಸಮನ್ವಯಾಧಿಕಾರಿ ಐಶ್ವರ್ಯಾ ಶ್ರೀನಿವಾಸ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಸೇರಿದಂತೆ ಗಣ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.