ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ಭೇದ ಭಾವವಿಲ್ಲದ ಕ್ಷೇತ್ರವಿದ್ದರೆ ಅದು ಕ್ರೀಡಾಕ್ಷೇತ್ರ ಎಂದು ಶಾಸಕ ಮಂತರ್ ಗೌಡ ಅಭಿಪ್ರಾಯಿಸಿದರು.ಜಿಲ್ಲಾ ರೋಮನ್ ಕೆಥೋಲಿಕ್ ಅಸೋಸಿಯೇಷನ್ ಹಾಗೂ ಸೋಮವಾರಪೇಟೆ ಜಯವೀರಮಾತೆ ದೇವಾಲಯದ ವತಿಯಿಂದ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರದಿಂದ ಆಯೋಜಿಸಿರುವ ಮೂರು ದಿನಗಳ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡಾಕೂಟಗಳಿಂದ ಎಲ್ಲ ರೀತಿಯ ಬಾಂಧವ್ಯಗಳು ಬೇಸೆಯುತ್ತವೆ. ಎಲೆ ಮರೆಯ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಭಾಗವಹಿಸುವುದು ಮುಖ್ಯ ಎಂದರು.
ಅಲ್ಪಸಂಖ್ಯಾತರ ರಕ್ಷಣೆ, ಅವರಿಗೆ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶುಶ್ರೂಷ್ ಗೌಡ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡಾಪಟುವಾಗಲು ಸಮತೋಲನ ಆಹಾರ ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದರು.
ಅಸೋಸಿಯೇಷನ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಏಪರ್ಡಿಸಿದರೆ ಆಸ್ಪತ್ರೆ ವತಿಯಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ವೈದ್ಯಕೀಯ ಕ್ಷೇತ್ರದ ಸೇವೆಯೊಂದಿಗೆ ರಾಜಕೀಯದಲ್ಲೂ ಜನಸೇವೆ ಮಾಡುವ ಆಕಾಂಕ್ಷೆಯಿದ್ದು, ನಮ್ಮ ಪಕ್ಷ ನನಗೆ ಟಿಕೆಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಅಥ್ಲೆಟಿಕ್ ತರಬೇತುದಾರರು ಹಾಗು ಮಾಜಿ ಪೊಲೀಸ್ ಅಧಿಕಾರಿ ಅಂತೋಣಿ ಡಿಸೋಜ, ಅಂತಾರಾಷ್ಟ್ರೀಯ ಒಳಾಂಗಣ ಕ್ರಿಕೆಟ್ ಆಟಗಾರ ಆಶಿಸ್ ಕ್ರಿಸ್ಟಿ, ನ್ಯಾನೋ ಸೈನ್ಸ್ ಸಂಶೋಧಕಿ ಗ್ಲೆನಿಟಾ ಬ್ರಿಜಿತ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಓಎಲ್ವಿ ದೇವಾಲಯದ ಧರ್ಮಗುರುಗಳಾದ ಎಂ.ರಾಯಪ್ಪ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟ ಅಧ್ಯಕ್ಷ ಗ್ರೇಷಿಯನ್ ರೋಡ್ರಿಗಸ್, ಅಮ್ಮತಿ ಚರ್ಚ್ ಧರ್ಮಗುರು ರೈಮಂಡ್, ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ.ಡಿಸಿಲ್ವಾ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶೀಲಾ ಡಿಸೋಜ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಪ್ರಮುಖರಾದ ಕೆ.ಎ.ಯಾಕೂಬ್, ಅಬ್ದುಲ್ ರಜಾಕ್, ಎಂ.ಟಿ.ಬೇಬಿ, ಐ.ಡಿ.ರಾಯ್, ಜೋಸೆಫ್ ಡಿಸಿಲ್ವಾ ಮತ್ತಿತರರು ಇದ್ದರು.