ಸಾರಾಂಶ
ಜಗಳೂರು :
ತಾಲೂಕಿನಲ್ಲಿ ಪ್ರಸ್ತುತ ವರ್ಷ 6900 ಹೆಕ್ಟೇರ್ ಕಡಲೆ ಬೆಳೆ ಬೆಳೆದಿದ್ದು ಡ್ರೋಣ್ ಮೂಲಕ ಔಷಧ ಸಿಂಪಡಣೆ ಮಾಡಿದರೆ ಸಮಯ ಮತ್ತು ನೀರಿನ ಉಳಿತಾಯದ ಜೊತಗೆ ಕಡಿಮೆ ಶ್ರಮ ವಿನಿಯೋಗಿಸಬಹುದು ಎಂದು ಟಿಕೆವಿಕೆ ಬೇಸಾಯ ತಜ್ಞ ಡಾ.ಬಿ.ಓ. ಮಲ್ಲಿಕಾರ್ಜುನ್ ರೈತರಿಗೆ ತಿಳಿಸಿದರು.
ತಾಲೂಕಿನಲ್ಲಿ ಅತಿ ಹೆಚ್ಚು ಕಡಲೆ ಬೆಳೆಯುವ ಕಲ್ಲೇದೇವರಪುರ ಗ್ರಾಮ ಪಂಚಾಯಿತಿಯಲ್ಲಿ ಕೆವಿಕೆ ಮತ್ತು ಬಿದರಕೆರೆ ತರಳಬಾಳು ಎಫ್ಪಿಒ ಸಂಯುಕ್ತಾಶ್ರಯದಲ್ಲಿ ಡ್ರೋಣ್ ಮೂಲಕ ಉಚಿತವಾಗಿ 62 ಎಕರೆ ಕಡಲೆ ಬೆಳೆಗೆ ಔಷಧ ಸಿಂಡಣೆಗೆ ಚಾಲನೆ ನೀಡಿ ಮಾತನಾಡಿದರು.
ಕಡಲೆ ಪ್ರಮುಖವಾದ ಹಿಂಗಾರಿನ ದ್ವಿದಳ ಧಾನ್ಯಗಳ ಬೆಳೆ. ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿದರೆ ಅನುಕೂಲವಾಗುತ್ತದೆ. ಅದರಲ್ಲಿ ಕೃಷಿಯಲ್ಲಿ ಡ್ರೋನ್ ಬಳಸಿ ಸಿಂಪರಣೆ ಮಾಡುವುದರಿಂದ ನಿಖರತೆ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಎಂ.ಜಿ. ಬಸವನಗೌಡ, ಪ್ರಾಕೃತಿಕ ವಿಕೋಪದಿಂದ ಈ ವರ್ಷ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಮಳೆಯಿಂದ ಈರುಳ್ಳಿ ಬೆಳೆಗಾರರಿಗೆ ಆರ್ಥಿಕ ನಷ್ಟವಾಗಿದೆ. ಹಾಗೆಯೇ ಉತ್ಪಾದನೆಯಲ್ಲಿ ಸಹ ಏರಿಳಿತ ಕಂಡಿದ್ದು, ಬೆಲೆಯು ಏರು ಮುಖದತ್ತ ಸಾಗಿದೆ. ಇತಹ ಸನ್ನಿವೇಶದಲ್ಲಿ ಹಿಂಗಾರಿನಲ್ಲಿ ಈರುಳ್ಳಿ ಬೆಳೆಗೆ ಸೂಕ್ತ ತಳಿಗಳ ಕೊರತೆಯಿದೆ. ಹಾಗಾಗಿ ಈ ವರ್ಷ ಕೇಂದ್ರದಿಂದ ಸೂಕ್ತ ತಳಿಯ ಬಗ್ಗೆ ನಿರ್ಧರಿಸಲು ಈರುಳ್ಳಿಯ ವಿವಿಧ ತಳಿಗಳ ತಂತ್ರಜ್ಞಾನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆರ್ಕ ಭೀಮ್, ಭೀಮಾ ರೆಡ್, ಮತ್ತು ಅಗ್ರಿ ಫೌಂಡ್ ಲೈನ್ ರೆಡ್ ಮೊದಲಾದ ತಳಿಗಳನ್ನು ಪ್ರಯೋಗದಲ್ಲಿ ಬಳಸುತ್ತಿದ್ದು, ಹಿಂಗಾರಿಗೆ ಸೂಕ್ತ ತಳಿಯನ್ನು ನಿರ್ಧರಿಸಲಾಗಿದೆ. ಕೃಷಿಯಲ್ಲಿ ನವೀನ ತಾಂತ್ರಿಕತೆಗಳನ್ನು ಬಳಸಿಕೊಂಡರೆ ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಂಪನಿಯ ನಿರ್ದೇಶಕ ಬಸಪ್ಪನಹಟ್ಟಿ ಕೃಷ್ಣಮೂರ್ತಿ ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರು ಹಾಗೂ ಇತರ ಗ್ರಾಮಸ್ಥರು ಭಾಗವಹಿಸಿದ್ದರು. ಎರಡು ದಿನಗಳಲ್ಲಿ 62 ಎಕರೆ ಔಷಧ ಸಿಂಪರಣೆಯನ್ನು ಕೈಗೊಳ್ಳಲಾಯಿತು.