ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಂತರ ನಾಲ್ಕನೇ ಅಂಗವಾಗಿರುವ ಪತ್ರಕರ್ತರು "ಸಮಾಜದ ಪ್ರತಿಬಿಂಬ’ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಗರದ ಜೆಎಸ್ಎಸ್ ಮಹಿಳಾಕಾಲೇಜಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜೆಎಸ್ಎಸ್ಮಹಾವಿದ್ಯಾಪೀಠದ ವತಿಯಿಂದ ಸೋಮವಾರ ನಡೆದ ವಿಜಯ ಕರ್ನಾಟಕ ಪ್ರಧಾನ ವರದಿಗಾರ ಕೆ.ಎಸ್.ಫಾಲಲೋಚನ ಆರಾಧ್ಯರಿಗೆ ’ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.೧೦ನೇ ಶತಮಾನದಲ್ಲಿ ವಿಶ್ವಶಾಂತಿಗಾಗಿ ಶ್ರಮಿಸಿದ ಸುತ್ತೂರು ಮಹಾಸಂಸ್ಥಾನದ ಕೊಡುಗೆ ಅಪಾರ, ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಗುರ್ತಿಸಿ, ಜೆಎಸ್ಎಸ್ಮಹಾವಿದ್ಯಾಪೀಠ ’ಶ್ರೀಶಿವರಾತ್ರೀಶ್ವರಮಾಧ್ಯಮಪ್ರಶಸ್ತಿ’ ಪ್ರತಿವರ್ಷ ಪ್ರದಾನ ಮಾಡುತ್ತಿರುವುದು ಪ್ರಶಂಸನೀಯ, ಪತ್ರಕರ್ತರು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು, ದೃಶ್ಯಮಾಧ್ಯಮಗಳು ಬಿತ್ತರಿಸುವ ಸುದ್ದಿಗಿಂತ ಪತ್ರಿಕಾಮಾಧ್ಯಮಗಳು ಪ್ರಕಟಿಸುವ ಸುದ್ದಿಗಳು ವಿಶೇಷತೆಯಿಂದ ಕೂಡಿರಬೇಕು. ಅನಧಿಕೃತ ವರದಿಗಾರಿಕೆಗೆ ಕಡಿವಾಣ ಹಾಕಲು ಸರ್ಕಾರ ಕಾಯ್ದೆ ಜಾರಿಮಾಡಬೇಕು, ಈ ದಿಸೆಯಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಸರ್ಕಾರದ ಮೇಲೆ ಒತ್ತಾಯ ಹೇರಬೇಕು ಎಂದು ಮನವಿ ಮಾಡಿದರು.
ಬೌಂಡರಿ ಗುರ್ತಿಸಿ ಕೊಡಿ:ನಮ್ಮ ತಂದೆ ದಿ.ಬಿ.ರಾಚಯ್ಯ ಅವರು ೧೯೬೧-೬೨ ರಲ್ಲಿ ಇದ್ದ ಸರ್ಕಾರದಲ್ಲಿ ಅರಣ್ಯಸಚಿವರಾಗಿದ್ದಾಗ ಕಾಡಂಚಿನ ಗ್ರಾಮಗಳಲ್ಲಿನ ದಲಿತ, ಹಿಂದುಳಿದ ವರ್ಗದವರಿಗೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಸಾಗುವಳಿಪತ್ರ ಪತ್ರ ನೀಡಿದ್ದರು. ಆದರೆ ಈವರೆಗೂ ಅವರಿಗೆ ಮೂಲನಕ್ಷೆ ಪ್ರಕಾರ ಜಿಲ್ಲಾಡಳಿತ ಹದ್ದುಬಸ್ತು ಗುರ್ತಿಸಿಕೊಟ್ಟಿಲ್ಲ. ಕೃಷಿಸಚಿವರು ಕೂಡಾ ಡ್ರೋನ್ ಸರ್ವೇ ಮಾಡಿದ್ದಾರೆ. ಕೂಡಲೇ ಈ ಕೆಲಸ ಮಾಡಿಕೊಡಬೇಕು, ಮಾಡಿಕೊಡುವವರೆಗೂ ನಮ್ಮ ಒತ್ತಾಯ ನಿರಂತರ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಳಿ ತಪ್ಪಿದಾಗ ಅವುಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತದೆ. ಜಿಲ್ಲೆಯಲ್ಲಿಯೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಉತ್ತಮ ಪತ್ರಕರ್ತರಿದ್ದು, ಅಂತಹವರಿಗೆ ಮಾತ್ರ ’ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ’ ಲಭ್ಯವಾಗಲಿದೆ. ಪತ್ರಕರ್ತರಿಗೆ ನಿವೇಶನ ವಿತರಿಸುವ ಸಂಬಂಧ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ಘಟಕದ ಬಳಿ ೩೫ ಎಕರೆ ಜಾಗವಿದ್ದು, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಬೇಕಿದೆ, ಇನ್ನು ೨ರಿಂದ ೩ತಿಂಗಳಲ್ಲಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ ಮಾತನಾಡಿ, ೨೦೧೧ ರಲ್ಲಿ ಜೆಎಸ್ಎಸ್ಮಹಾವಿದ್ಯಾಪೀಠ ’ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ’ ಸ್ಥಾಪನೆ ಮಾಡಲಾಗಿದ್ದು, ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಫಾಲಲೋಚನ ಆರಾಧ್ಯ ಸೇರಿದಂತೆ ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ’ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ’ ಕೊಡಮಾಡಲಾಗಿದೆ ಎಂದರು.ಕಾರ್ಯನಿರತ ಪತ್ರಕರ್ತರಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚಾಮರಾಜನಗರ ಗಡಿಜಿಲ್ಲೆಯಾದರೂ, ವಿಭಿನ್ನವಾಗಿ ವರದಿ ಮಾಡುವ, ಸರ್ಕಾರವನ್ನು ಎಚ್ಚರಿಸುವ ಕೆಲಸಮಾಡುತ್ತಿದ್ದಾರೆ ಎಂದರು. ಪ್ರಶಸ್ತಿ ಸ್ವೀಕರಿಸಿದ ವಿಜಯಕರ್ನಾಟಕ ಪತ್ರಿಕೆ ವರದಿಗಾರ ಫಾಲಲೋಚನ ಆರಾಧ್ಯ ಮಾತನಾಡಿ, ನನ್ನ ಕರ್ತವ್ಯದ ಅವಧಿಯ ೨೪ವರ್ಷದಲ್ಲಿ ಸನ್ಮಾನದಿಂದ ಬಲುದೂರ ಇದ್ದೇ, ’ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ’ಯನ್ನು ಸಂಘದ ಪದಾಧಿಕಾರಿಗಳ ಒತ್ತಾಯದ ಮೇರೆಗೆ ಸ್ವೀಕರಿಸಿದ್ದೇನೆ. ಪತ್ರಿಕಾ ವರದಿಗಾರನಾಗಿ ನನ್ನ ಕೆಲಸ ತೃಪ್ತಿನೀಡಿದೆ, ಪ್ರಶಸ್ತಿಗೆ ಆಯ್ಕೆ ಮಾಡಿದ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ನನಗೆ ಶುಭಾಶಯ ಕೋರಿದ ಎಲ್ಲರಿಗೂ ಚಿರಋಣಿ ಎಂದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ನಗರಸಭೆಸದಸ್ಯೆ ಕುಮುದಾ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಪಿಆರ್ಒಆರ್.ಎಂ.ಸ್ವಾಮಿ, ಪ್ರಾಂಶುಪಾಲ ಮಹದೇವಸ್ವಾಮಿ, ವಿವಿಧ ಸಂಘಸಂಸ್ಥೆಗಳ ಮುಖಂಡರು, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ರಾಜ್ಯಕಾರ್ಯಕಾರಣಿ ಸದಸ್ಯ ಗೂಳೀಪುರನಂದೀಶ್, ಸದಸ್ಯರು, ಸಂಘಸಂಸ್ಥೆಗಳ ಮುಖಂಡರು ಹಾಜರಿದ್ದರು.