ಸಾರಾಂಶ
ಅರಸೀಕೆರೆ: ನಗರದ ಅನಂತ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಶ್ರೀಕೃಷ್ಣನ ವೇಷದಲ್ಲಿ ಹಾಗೂ ತಾಯಂದಿರು ಯಶೋಧರೆಯ ವೇಷದಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಸುರೇಶ್ ಕುಮಾರ್ ಕುಂದೂರು ಮಾತನಾಡಿ, ಮನುಷ್ಯನ ಆಧ್ಯಾತ್ಮಿಕ ಚಿಂತನೆಗಳು ಅವನಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಮನಸ್ಸನ್ನು ಸದೃಢಗೊಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್. ಅನಂತಕುಮಾರ್ ಮಕ್ಕಳ ಮನಸ್ಸು ಸಸಿಗಳಿದ್ದಂತೆ. ಈ ಮನಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದರೆ, ಅವರು ಭವಿಷ್ಯದ ಹೆಮ್ಮೆಯ ಮರಗಳಾಗಿ ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಈ ಉದ್ದೇಶದಿಂದಾಗಿ ಶಾಲೆಯಲ್ಲಿ ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಜೊತೆಗೆ ಮಕ್ಕಳಿಂದ ಮತ್ತು ಪೋಷಕರಿಂದ ಕೃಷ್ಣನ ಜೀವನವೃತ್ತಾಂತವನ್ನು ಆಧಾರಿತ ನೃತ್ಯರೂಪಕವೂ ಪ್ರದರ್ಶಿಸಲಾಯಿತು, ಇದು ಸಭಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್. ಅನಂತಕುಮಾರ್, ನಿರ್ದೇಶಕರಾದ ಪ್ರಶಾಂತ್ ಅನಂತಕುಮಾರ್ ಹಾಗೂ ಅಭಿನಿತ ಪ್ರಶಾಂತ್, ಪ್ರಾಂಶುಪಾಲ ಡಾ. ಸುರೇಶ್ ಕುಮಾರ್ ಕುಂದೂರು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.