ಬೇಬಿಬೆಟ್ಟದ ಜಾತ್ರೆಯಲ್ಲಿ ಶ್ರೀಮಹದೇಶ್ವರ, ಸಿದ್ದೇಶ್ವರ ಸ್ವಾಮಿ ರಥೋತ್ಸವ

| Published : Mar 16 2024, 01:50 AM IST

ಸಾರಾಂಶ

ಶ್ರೀಮಹದೇಶ್ವರ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವವು ಮೈಸೂರು ಮಹರಾಜರ ಆಳ್ವಿಕೆಯ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ. ಮೈಸೂರು ಮಹಾರಾಜರು ರಥೋತ್ಸವ ಹಾಗೂ ಧನಗಳ ಜಾತ್ರೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿಬೆಟ್ಟದ ಭಾರೀ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ಶುಕ್ರವಾರ ಶ್ರೀಮಹದೇಶ್ವರ ಮತ್ತು ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಜಾತ್ರೆ ಆವರಣದಲ್ಲಿ ಶ್ರೀಮಹದೇಶ್ವರ ಮತ್ತು ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಹಲವು ಹೋಮ ಹವನಗಳು ನಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸುಮಾರು ರಥೋತ್ಸವಕ್ಕೆ ಶ್ರೀರಾಮಯೋಗಿಶ್ವರ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ಹಾಗೂ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ದೇವಸ್ಥಾನದ ಆವರಣದಲ್ಲಿ ನಡೆದ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಹಲವಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಉಘೇ ಮಾದಪ್ಪ... ಉಘೇ ಮಾದಪ್ಪ ಎಂಬ ಘೋಷಣೆಕೂಗುತ್ತ ರಥೋತ್ಸವಕ್ಕೆ ಹಣ್ಣುಜವನ ಎಸೆದು ಭಕ್ತರಿ ಭಾವ ಪ್ರದರ್ಶಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರು ಸಂಖ್ಯೆಯಲ್ಲಿ ರಾಸುಗಳು ಆಗಮಿಸುವ ಮೂಲಕ ಜಾತ್ರೆ ಮೆರಗು ನೀಡಿದೆ ಎಂದರು.

ಶ್ರೀಮಹದೇಶ್ವರ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವವು ಮೈಸೂರು ಮಹರಾಜರ ಆಳ್ವಿಕೆಯ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ. ಮೈಸೂರು ಮಹಾರಾಜರು ರಥೋತ್ಸವ ಹಾಗೂ ಧನಗಳ ಜಾತ್ರೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬೇಬಿಬೆಟ್ಟದ ಜಾತ್ರೆಯನ್ನು ವಿಶೇಷವಾಗಿ ನಡೆಸಲಾಗಿದೆ. ಜಾತ್ರೆ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಮಾ.19 ರಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ಪೂರ್ಣ ಜಿಲ್ಲಾ ರೈತಸಂಘದ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಸುನೀತ ಪುಟ್ಟಣ್ಣಯ್ಯ, ತಾಲೂಕು ರೈತಸಂಘದ ಅಧ್ಯಕ್ಷ ಪಿ.ನಾಗರಾಜು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ರೈತ ಮುಖಂಡ ಕೆ.ಟಿ.ಗೋವಿಂದೇಗೌಡ, ರಾಘವ, ಕಟ್ಟೇರಿ ಮಹದೇವು, ಯುವ ಮುಖಂಡ ಎಸ್‌ಎಸ್‌ಎಸ್ ಸತೀಶ್ ಶಿಂಡಭೋಗನಹಳ್ಳಿ, ರೈತ ಮುಖಂಡ ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.