ಅರಸೀಕೆರೆ: ನಗರದಲ್ಲಿನ ಶ್ರೀರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘವು ಕಳೆದ ಎಂಟು ದಿನಗಳಿಂದ ಶ್ರೀರಾಮ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಭಾನುವಾರ ಶ್ರೀ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ನವಗ್ರಹ ಪೂಜೆ ಸೂರ್ಯ ನಮಸ್ಕಾರ ರಾಮಾಯಣ ಪಾರಾಯಣ ಪಠಣ ಶ್ರೀ ಸೀತಾರಾಮರಿಗೆ ಪಂಚಾಮೃತ ಅಭಿಷೇಕ ಅಷ್ಟಾವಧಾನ ಮಹಾಮಂಗಳಾರತಿ ನೆರವೇರಿತು. ತಾಲೂಕು ಬ್ರಾಹ್ಮಣ ಸಂಘ ವಿಪ್ರ ನೌಕರರ ಸಂಘ ಸೀತಾ ಮಹಿಳಾ ಸಂಘ ಯುವಕ ಸಂಘ ಮತ್ತು ಯಾಜ್ಞವಲ್ಕ ಸಂಘ ಹಾಗೂ ಪಾಕ ತಜ್ಞರ ಸಂಘದ ಪದಾಧಿಕಾರಿಗಳು ಸದಸ್ಯರುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಶ್ರೀ ರಾಮನವಮಿ ಕಾರ್ಯಕ್ರಮವು ಸಂಭ್ರಮದಿಂದ ಜರಗಿತು. ಶ್ರೀ ಸೀತಾರಾಮರ ಕಲ್ಯಾಣ ಮಹೋತ್ಸವವನ್ನು ಸೀತಾ ಮಹಿಳಾ ಸಂಘವು ಸಂಭ್ರಮದಿಂದ ಆಚರಿಸಿತು ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅವರ ಉತ್ಸವವು ವಿಜೃಂಭಣೆಯಿಂದ ಜರುಗಿತು. ಉತ್ಸವದಲ್ಲಿ ಶ್ರೀರಾಮನಾಮ, ಭಜನೆ ಸಂಕೀರ್ತನೆಗಳು ಸೀತಾ ಮಹಿಳಾ ಸಂಘ ಹಾಗೂ ಭಕ್ತರಿಂದ ನಡೆಯಿತು.

ತಾಲೂಕು ಬ್ರಾಹ್ಮಣ ಸಂಘವು ಸೋಮವಾರ ಶ್ರೀ ಸೀತಾರಾಮರ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.