ಸಾರಾಂಶ
ಈ ಬಾರಿ ಹಿಂದೂಗಳ 500 ವರ್ಷಗಳ ರಾಮಮಂದಿರ ನಿರ್ಮಾಣ ಕನಸು ನನಸಾಗಿರುವುದರಿಂದ ಗ್ರಾಮದಲ್ಲಿನ ಯುವಕರು ಬಹಳ ಸಡಗರದಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಕನಕಪುರ: ತಾಲೂಕಾದ್ಯಂತ ಶ್ರೀ ರಾಮನವಮಿಯನ್ನು ಭಕ್ತರು ಸಂಭ್ರಮ, ಸಡಗರದಿಂದ ಆಚರಿಸಿದರು. ಹಿಂದೂಗಳ ಆರಾಧ್ಯ ದೈವ, ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀರಾಮ ಚಂದ್ರನ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಲವು ಗ್ರಾಮಗಳಲ್ಲಿ ಆಚರಿಸಲಾಯಿತು.
ಅದರಲ್ಲೂ ಈ ಬಾರಿ ಹಿಂದೂಗಳ 500 ವರ್ಷಗಳ ರಾಮಮಂದಿರ ನಿರ್ಮಾಣ ಕನಸು ನನಸಾಗಿರುವುದರಿಂದ ಗ್ರಾಮದಲ್ಲಿನ ಯುವಕರು ಬಹಳ ಸಡಗರದಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದಲೇ ಮಜ್ಜಿಗೆ, ಪಾನಕ ವಿತರಿಸುವ ಮೂಲಕ ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಸಂಭ್ರಮಿಸಿದರು.ನಗರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ, ಕೋಟೆ ಆಂಜನೇಯ, ಹೊಳೆಕಟ್ಟೆ ಪ್ರಾಣದೇವರು, ಬಸ್ ನಿಲ್ದಾಣದ ಬಳಿಯ ಮಾರುತಿ ದೇವಾಲಯ ಸೇರಿ ತಾಲೂಕಿನ ಹಲವು ದೇವಾಲಯಗಳಲ್ಲಿ ಪ್ರಭು ಶ್ರೀರಾಮಚಂದ್ರ ಹಾಗೂ ಆಂಜನೇಯನಿಗೆ ವಿಶೇಷವಾಗಿ ಅಲಂಕೃತಗೊಳಿಸಿ ಪೂಜಿಸಲಾಯಿತು.ಕನಕಪುರದ ತಾಲೂಕು ಕಚೇರಿ ಮುಂಭಾಗ ಶ್ರೀರಾಮ ಸೇನೆ ವತಿಯಿಂದ ಶ್ರೀರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸೇನೆಯ ಜಿಲ್ಲಾಧ್ಯಕ್ಷ ನಾಗರ್ಜುನ್ ಗೌಡ ಹಾಗೂ ಪದಾಧಿಕಾರಿಗಳಾದ ನವೀನ್, ದರ್ಶನ್, ವಿನೋದ್ ಸೇರಿ ಹಲವರು ಉಪಸ್ಥಿತರಿದ್ದರು.