ಕೂಡ್ಲಿಗಿ: ಬಳ್ಳಾರಿ ಲೋಕಸಭಾ ಚುನಾವಣೆಯ ಬಿಜೆಪಿ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಶ್ರೀರಾಮುಲು ಮಾ. 1ರಂದು ತಾಲೂಕಿನ ಬಣವಿಕಲ್ಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಡಾಬಾ ಬಳಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಔತಣಕೂಟ ಆಯೋಜಿಸಿದ್ದಾರೆ.ಶ್ರೀರಾಮುಲು ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಆದರೂ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆಲ್ಲಲೇಬೇಕೆಂದು ಶ್ರೀರಾಮುಲು ಜಿಲ್ಲಾದ್ಯಂತ ನಿರಂತರವಾಗಿ ಸಂಚಾರ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪಾಳೆಯ ಈಗಿನಿಂದಲೇ ಚುನಾವಣೆ ರಣತಂತ್ರಗಳನ್ನು ಮಾಡುತ್ತಿದೆ. ಇತ್ತೀಚೆಗೆ ಶ್ರೀರಾಮುಲು ಅಲ್ಲದೇ ರಾಜ್ಯದ ಘಟಾನುಘಟಿ ನಾಯಕರು ತಾಲೂಕಿಗೆ ಭೇಟಿ ನೀಡುತ್ತಿರುವುದು ಸಹ ಇಲ್ಲಿಯ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ. 2 ದಿನಗಳ ಹಿಂದೆ ಬಿಜೆಪಿ ಮುಖ್ಯಸಚೇತಕ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಬಿಜೆಪಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಕಾರ್ಯಕರ್ತರ ಜತೆ ಪಕ್ಷದ ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಹೊಸಬರಿಗೆ ಮಣೆ: ಇತ್ತೀಚೆಗೆ ಜಿಲ್ಲಾದ್ಯಂತ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು. ಅಳೆದು ತೂಗಿ ಜಾತಿ ಲೆಕ್ಕಾಚಾರ ಸೇರಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೂ ತಾಲೂಕು ಹಾಗೂ ಜಿಲ್ಲಾ ಮಟ್ಟದ ಹುದ್ದೆಗಳನ್ನು ನೀಡಲಾಗಿದೆ. ತೆರೆಮರೆಯಲ್ಲಿದ್ದ ಕಾರ್ಯಕರ್ತರಿಗೆ ಮೋರ್ಚಾಗಳ, ಮಂಡಲ ಅಧ್ಯಕ್ಷರನ್ನಾಗಿ ಮಾಡಿದ್ದು, ಈ ಮೂಲಕ ಬಿಜೆಪಿ ತಳಮಟ್ಟದಲ್ಲಿ ಸಂಘಟನೆ ಮಾಡಲು ಮುಂದಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ ಮಂಡಲ ಅಧ್ಯಕ್ಷರಾಗಿ ಬಣವಿಕಲ್ಲು ರಾಜು ಅವರನ್ನು ನೇಮಕ ಮಾಡಲಾಗಿದೆ.
ಔಪಚಾರಿಕ ಸಭೆ: ಮಾ. 1ರಂದು ಶ್ರೀರಾಮುಲು ಅವರು ಬಣವಿಕಲ್ಲು ಸಮೀಪದ ತೋಟದ ಮನೆಯಲ್ಲಿ ಬಿಜೆಪಿ ಮುಖಂಡರ, ಕಾರ್ಯಕರ್ತರ ಔಪಚಾರಿಕ ಸಭೆಯನ್ನು ಕರೆಯಲಾಗಿದೆ. ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಆಗಮಿಸುವರು ಎಂದು ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ರಾಜು ತಿಳಿಸಿದರು.ಬಿಜೆಪಿ ಕಾರ್ಯಕರ್ತರಿಗೆ ಶ್ರೀರಾಮುಲು ಔತಣಕೂಟ!
ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆಲ್ಲಲೇಬೇಕೆಂದು ಶ್ರೀರಾಮುಲು ಜಿಲ್ಲಾದ್ಯಂತ ನಿರಂತರವಾಗಿ ಸಂಚಾರ ಕೈಗೊಂಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.