- ಶಾಮನೂರು ಜನ್ಮದಿನಕ್ಕೆ ಈವರೆಗೆ 450ಕ್ಕೂ ಹೆಚ್ಚು ಜೋಡಿಗಳಿಗೆ ಸಾಮೂಹಿಕ ವಿವಾಹ: ಸಂಸದೆ ಡಾ.ಪ್ರಭಾ - ಸತಿ-ಪತಿ ಜೀವನ ಬಂಡಿಯ ಚಕ್ರಗಳಿದ್ದಂತೆ, ಇಬ್ಬರೂ ಹೊಂದಿಕೊಂಡು ಬಾಳಿ: ಎಸ್.ಎಸ್. ಮಲ್ಲಿಕಾರ್ಜುನ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಒಂದು ಮದುವೆ ಮಾಡುವುದಕ್ಕೆ ಲಕ್ಷಾಂತರ ರು. ಖರ್ಚು ಮಾಡಬೇಕಾದ ಪರಿಸ್ಥಿತಿ ಇಂದಿನದು. ಹೀಗಿರುವಾಗ ಅಪ್ಪಾಜಿ ಡಾ.ಶಾಮನೂರು ಶಿವಶಂಕರಪ್ಪನವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸಾಮೂಹಿಕ ವಿವಾಹದ ಮೂಲಕ ಈವರೆಗೆ 450ಕ್ಕೂ ಹೆಚ್ಚು ಜೋಡಿಗೆ ಮದುವೆ ಮಾಡಿಸಿ, ಬಡ-ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಹೊರೆ ಇಳಿಸಿ, ಮಾನವೀಯ, ಮಾದರಿ ಕಾರ್ಯವನ್ನು ಎಸ್ಸೆಸ್ಸೆಂ ಅಭಿಮಾನಿ ಬಳಗ ಮಾಡುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶ್ಲಾಘಿಸಿದರು.ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಪಕ್ಕದಲ್ಲಿ ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪನವರ 96ನೇ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 60 ಜೋಡಿ ನವ-ದಂಪತಿಗೆ ತಾಳಿ, ಕಾಲುಂಗುರ, ಸೀರೆ, ಹೊಸೆ ಬಟ್ಟೆ ವಿತರಿಸಿ ಅವರು ಮಾತನಾಡಿದರು. ಅಪ್ಪಾಜಿ ಜನ್ಮದಿನಕ್ಕೆ ಎಸ್ಸೆಸ್ಸೆಂ ಅಭಿಮಾನಿ ಬಳಗ 2-3 ತಿಂಗಳ ಮುಂಚೆಯೇ ಸಾಮೂಹಿಕ ವಿವಾಹ ಸಿದ್ಧತೆ ಮಾಡಿಕೊಂಡು, ಇಷ್ಟೊಂದು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದ್ದು ಶ್ಲಾಘನೀಯವಾಗಿದೆ ಎಂದರು.
ಕಳೆದ 19 ವರ್ಷದಿಂದಲೂ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದು, ಅಪ್ಪಾಜಿಯವರ ಎಲ್ಲ ಹಿತೈಷಿಗಳು, ಅಭಿಮಾನಿಗಳು, ಕೇವಲ ಕಾಂಗ್ರೆಸ್ ಸೇರಿದಂತೆ ಎಲ್ಲ ಅಭಿಮಾನಿ ಬಳಗದವರು ಸೇರಿ, 59 ಜೋಡಿಗಳಿಗೆ ಕಂಕಣಭಾಗ್ಯ ಕಲ್ಪಿಸಿದ್ದು ಕಡಿಮೆ ಸಾಧನೆಯಲ್ಲ. ನಾವೆಲ್ಲರೂ ನವಜೋಡಿಗಳಿಗೆ ಆದರ್ಶ ದಂಪತಿಗಳಾಗಿ ಮಾದರಿ ಜೀವನ ನಡೆಸುವಂತೆ ಶುಭ ಹಾರೈಸಿದ್ದೇವೆ. ಅಪ್ಪಾಜಿ ಎಲ್ಲಿದ್ದಾರೆಂದರೆ ನಮ್ಮೆಲ್ಲರ ಮನಸ್ಸಿನಲ್ಲಿದ್ದಾರೆ. ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಎಸ್ಸೆಸ್ ಜನ ಕಲ್ಯಾಣ ಟ್ರಸ್ಟ್ನಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ 6 ಜನ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಿದ್ದೇವೆ. ಟ್ರಸ್ಟ್ನಲ್ಲಿ ಅಪ್ಪಾಜಿ ₹5 ಕೋಟಿ ಠೇವಣಿ ಇಟ್ಟಿದ್ದು, ಈವರೆಗೆ 12,655 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. 2012ರಿಂದ ಈ ಕಾರ್ಯ ನಡೆಯುತ್ತಿದೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಒಲವು ಹೊಂದಿದ್ದ ಅಪ್ಪಾಜಿ ಶಿಕ್ಷಣಕ್ಕೆ ಬಡತನ ಅಡ್ಡಿ ಆಗಬಾರದು. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಒಳ್ಳೆಯ ಶಿಕ್ಷಣವೇ ದೊಡ್ಡ ಆಸ್ತಿ ಎನ್ನುತ್ತಿದ್ದರು. ಎಲ್ಲ ಮಕ್ಕಳು ಉತ್ತಮ ಸಾಧನೆ ತೋರಿ, ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತರಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ತಮ್ಮ ತಂದೆ ಶಾಮನೂರು ಶಿವಶಂಕರಪ್ಪನವರ 96ನೇ ಜನ್ಮದಿನದ ಅಂಗವಾಗಿ ಎಸ್.ಎಸ್. ಅಭಿಮಾನಿ ಬಳಗ, ಯುವಕರು, ನಮ್ಮೆಲ್ಲಾ ಮುಖಂಡರು ಸೇರಿ, 2 ತಿಂಗಳ ಪರಿಶ್ರಮದಿಂದ ಕಲ್ಯಾಣ ಕಾರ್ಯ ನಡೆಸಿದ್ದಾರೆ. ನಿನ್ನೆ ಮಂಗಳವಾರ ಅಮವಾಸ್ಯೆ ಕಾರಣಕ್ಕೆ ಇಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಬಂದಂತಹ ಯಾರಿಗೂ ತೊಂದರೆ ಆಗದಂತೆ ಊಟದ ವ್ಯವಸ್ಥೆಮಾಡಿದೆ. ನೂತನ ಸತಿ-ಪತಿ ಆದರ್ಶ ಬಾಳು ಬಾಳಬೇಕು. ಜೀವನ ರಥದ ಎರಡು ಚಕ್ರಗಳಾಗಿ, ಇಬ್ಬರಲ್ಲಿ ಒಬ್ಬರು ಹೊಂದಿಕೊಂಡು ಹೋದಾಗ ಸಂಸಾರ ಸರಾಗವಾಗಿ ನಡೆಯುತ್ತದೆ ಎಂದರು.ದಾವಣಗೆರೆ, ಹಾವೇರಿ, ವಿಜಯಪುರ, ಬಾಗಲಕೋಟೆ, ಹೊಸಪೇಟೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಅನೇಕ ಕಡೆಗಳಿಂದ ಜನ ಬಂದಿದ್ದಾರೆ. ಬಂದವರು ಅಷ್ಟೇ ಸಡಗರ, ಸಂಭ್ರಮದಿಂದ ನಿಮ್ಮ ಊರು, ಮನೆಗಳಿಗೆ ತಲುಪಿ. ಒಂದು ಮದುವೆ ಮಾಡಬೇಕೆಂದರೆ ಸಾಕಷ್ಟು ಖರ್ಚು ಆಗುತ್ತದೆ. ಇಲ್ಲಿ ನೋಂದಣಿ ಮಾಡಿದರೆ ಅಂತಹವರಿಗೆ ಪ್ರತಿಯೊಂದು ವ್ಯವಸ್ಥೆಯನ್ನು ಎಸ್ಎಸ್ ಬಳಗ ನೋಡಿಕೊಳ್ಳುತ್ತದೆ. ಬಳಗದ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದ್ದು, ಸುಮಾರು 450ಕ್ಕೂ ಹೆಚ್ಚು ಜೋಡಿಗಳು ಆದರ್ಶ ಬಾಳುವೆ ಮಾಡುವ ಮೂಲಕ ಎಸ್ಸೆಸ್ ಅಭಿಮಾನಿ ಬಳಗ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಹಿರಿಯರಾದ ಶಾಮನೂರು ಜನ್ಮದಿನ ಅಂದವಾಗಿ 60 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೀರಿ. ಆ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲೂ ಇರಲಿ. ಶಿವಶಂಕರಪ್ಪನವರು ಹೆಚ್ಚು ಮಾತನಾಡುತ್ತಿರಲಿಲ್ಲ. ಮಾತನಾಡಿದರೆ ಬಸವಣ್ಣನವರ ವಚನದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದಂತಿರಬೇಕು ಎಂಬಂತಿರುತ್ತಿತ್ತು. 21 ವರ್ಷಗಳ ನನ್ನ ಸೇವೆಯಲ್ಲಿ ಬೆಂಗಳೂರು ಬಿಟ್ಟು ಬೇರೆಯೂ ಕೆಲಸ ನಿರ್ವಹಿಸಿಲ್ಲ. ನನ್ನ ಪುಣ್ಯವೇ ಏನೋ ಶಾಮನೂರು ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಎಂದಿಗೂ ಅದನ್ನು ಮರೆಯುವುದಿಲ್ಲ ಎಂದು ಹೇಳಿದರು.ಬಳಗದ ಅಧ್ಯಕ್ಷ ಮುದೇಗೌಡ್ರ ಗಿರೀಶ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಮಾಜಿ ಶಾಸಕ ಎಸ್.ರಾಮಪ್ಪ, ಬಳಗದ ಡಾ. ಎಚ್.ಬಿ. ಅರವಿಂದ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಶಾಮನೂರು ಟಿ.ಬಸವರಾಜ, ಪಾಲಿಕೆ ಆಯುಕ್ತ ಡಾ.ಮಹಾಂತೇಶ, ದೂಡಾ ಆಯುಕ್ತೆ ರೇಣುಕಾ, ಬಳಗದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪರಶುರಾಮ ಮಾಗಾನಹಳ್ಳಿ, ಕಕ್ಕರಗೊಳ್ಳ ವೀರೇಶ ಪಟೇಲ್, ಜಿ.ಸಿ. ನಿಂಗಪ್ಪ ಹದಡಿ, ಜಿ.ಡಿ. ಗುರುಸ್ವಾಮಿ, ಎಸ್.ಮಲ್ಲಿಕಾರ್ಜುನ, ಕೆ.ಎನ್.ಮಂಜುನಾಥ, ರಾಘವೇಂದ್ರ ನಾಯ್ಕ, ಪೂರ್ಣಿಮಾ ಹದಡಿ, ಅನಿತಾ ಬಾಯಿ ಮಾಲತೇಶ, ಎ.ನಾಗರಾಜ, ದಾದು ಸೇಟ್, ಕೊಮಾರನಹಳ್ಳಿ ಮಂಜುನಾಥ, ಹುಲಿಗೇಶ, ಕೆಲವು ಸ್ವಾಮೀಜಿಗಳು, ಮುಖಂಡರು, ವಧು-ವರರು, ಬಂಧು-ಬಳಗದವರು ಇದ್ದರು.
- - -(ಗಣ್ಯರ ಕೋಟ್ಸ್) ಶಾಮನೂರು ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ನಾವ್ಯಾರು ಮರೆಯಲು ಸಾಧ್ಯವಿಲ್ಲ. ದಾವಣಗೆರೆ ಎಜುಕೇಷನ್ ಹಬ್ ಆಗಲು ಕಾರಣವೇ ಎಸ್ಸೆಸ್. ನಾಡಿಗೆ, ಜಿಲ್ಲೆಗೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಅಂತಹವರ ಮಾರ್ಗದರ್ಶನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರುಗೆ ದಾವಣಗೆರೆ ನಗರ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕಾರ ಕೊಡುತ್ತಿರುವುದು ಶ್ಲಾಘನೀಯ.
- ಪಿ.ಟಿ.ಪರಮೇಶ್ವರ ನಾಯ್ಕ, ಮಾಜಿ ಸಚಿವ.- - - ಹಿರಿಯರಾದ ಶಾಮನೂರು ಶಿವಶಂಕರಪ್ಪ ರಾಜಕೀಯ ಕ್ಷೇತ್ರದ ಒಬ್ಬ ಸಂತರು. ಪ್ರತಿಯೊಬ್ಬರೂ ಶಾಮನೂರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು. ಅಂತಹ ವ್ಯಕ್ತಿಯ ಹೆಸರಿನಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದಿದೆ. ಸಂಸಾರವೆಂದರೆ ಬಾವಿ ಅಲ್ಲ, ಅದು ಸುಖ ಸಾಗರ. ದಂಪತಿಗಳು ಒಬ್ಬರಿಗೊಬ್ಬರು ಹೊಂದಿಕೊಂಡು ಜೀವನ ನಡೆಸುವುದೇ ಸುಖಸಂಸಾರ. ನೀವು ನಿಮ್ಮ ಮಕ್ಕಳಿಗೆ ಆಸ್ತಿ ಮಾಡಬೇಡಿ, ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ದೊಡ್ಡ ಆಸ್ತಿಯನ್ನಾಗಿ ಮಾಡಿರಿ.
- ಚಟ್ನಹಳ್ಳಿ ಮಹೇಶ, ಉಪನ್ಯಾಸಕ.- - - ಅಪ್ಪಾಜಿ ಜೊತೆ ಪಾರ್ವತಮ್ಮ ಶಾಮನೂರು ಆದರ್ಶ ದಂಪತಿಗಳು. ಅಪ್ಪಾಜಿಯಲ್ಲಿದ್ದ ಗುಣವೆಂದರೆ ತಾಳ್ಮೆ, ಸೂಕ್ಷ್ಮತೆ ಮತ್ತು ಕಾಳಜಿ. ಯಾರೇ ಬಂದರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಫಸ್ಟ್ ಜನರೇಷನ್ನಲ್ಲಿ ನಾವು ಇಷ್ಟೊಂದು ಸೊಸೆಯಂದಿರಿದ್ದೀವಿ. ಈಗ ಸೆಕೆಂಡ್ ಜನರೇಷನ್ ಸೊಸೆಯಂದಿರು ಬಂದಿದ್ದು, ನಾವು ಅತ್ತೆಯಾಗಿದ್ದೇವೆ. ಇಲ್ಲಿ ವಿವಾಹವಾಗಿದ್ದು 60 ಜೋಡಿಗಳದ್ದಷ್ಟೇ ಅಲ್ಲ, 120 ಕುಟುಂಬಗಳ ಮಧ್ಯೆ ಬಾಂಧವ್ಯ ವೃದ್ಧಿಯಾಗಿದೆ. ಈ ಎಲ್ಲ ಕುಟುಂಬಗಳು ತಮ್ಮ ಸೊಸೆಯನ್ನು ಮಗಳಾಗಿ, ಅಳಿಯನ್ನ ಮಗನಂತೆ ಕಾಣಬೇಕು. ಅವರು ಮಾಡಿದ ತಪ್ಪನ್ನು ತೋರಿಸದೇ ಕ್ಷಮಿಸಿ, ಸರಿಯಾಗಿ ಮಾರ್ಗದರ್ಶನ ಮಾಡಬೇಕು.
- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.- - -
-(ಫೋಟೋಗಳಿವೆ.)