ಸಾರಾಂಶ
- ಎಸ್ಎಸ್ಕೆ ಸಮಾಜ ರಾಜ್ಯಮಟ್ಟದ 2ನೇ ಸಿಎಂಸಿ ಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
- ನೂತನ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ- - -
ಕನ್ನಡಪ್ರಭ ವಾರ್ತೆ ದಾವಣಗೆರೆ15-20 ವರ್ಷಗಳ ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಂಡರೆ ಹುಬ್ಬಳ್ಳಿ ಇಂದು ಏನಾದರೂ ಸುರಕ್ಷಿತವಾಗಿದ್ದರೆ ಅದಕ್ಕೆ ಸೂರ್ಯವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವೇ ಕಾರಣ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದ ಬಂಟರ ಭವನದಲ್ಲಿ ಭಾನುವಾರ ಸೂರ್ಯವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್ಎಸ್ಕೆ) ಸಮಾಜದ ರಾಜ್ಯಮಟ್ಟದ 2ನೇ ಸಿಎಂಸಿ ಸಭೆ ಹಾಗೂ ನೂತನ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಹುಬ್ಬಳ್ಳಿಯಲ್ಲಿ ಎಸ್ಎಸ್ಕೆ ಸಮಾಜ ಒಂದೂವರೆ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಆಗಿನ ಘಟನೆಗಳಲ್ಲಿ ಸೈನಿಕರಂತೆ ಕೆಲಸ ಮಾಡಿ, ಹುಬ್ಬಳ್ಳಿಯನ್ನು ರಕ್ಷಣೆ ಮಾಡಿದ್ದು ಸೂರ್ಯವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು. ಇದನ್ನು ನಾವ್ಯಾರೂ ಮರೆಯಬಾರದು ಎಂದು ಹೇಳಿದರು.
ನನಗೆ ಇಂತಹ ಮಾತು ಹೇಳುವುದಕ್ಕೆ ಯಾವುದೇ ಭಯವಿಲ್ಲ. ಇದ್ದಿದ್ದನ್ನು ಇದ್ದಂತೆ ಹೇಳುವವ ನಾನು. ನನಗೆ ಯಾರ ಹೆದರಿಕೆ, ಬೆದರಿಕೆಯೂ ಇಲ್ಲ. ಎಸ್ಎಸ್ಕೆ ಸಮಾಜ ಮಾಡಿರುವ ಒಳ್ಳೆಯ ಕೆಲಸದ ಬಗ್ಗೆ ಹೇಳಲೇಬೇಕಾಗುತ್ತದೆ. ಇಲ್ಲದಿದ್ದರೆ ಹುಬ್ಬಳ್ಳಿಯಲ್ಲಿ ಆಗ ದೊಡ್ಡ ದೊಡ್ಡ ಅನಾಹುತಗಳೇ ಆಗಿರುತ್ತಿದ್ದವು. ಅವುಗಳನ್ನೆಲ್ಲಾ ನೀವು ರಕ್ಷಣೆ ಮಾಡಿಕೊಂಡು ಬಂದಿದ್ದೀರಿ. ಇಂದು ನಿಮ್ಮ ಸಮಾಜ ಮತ್ತಷ್ಟು ಸಂಘಟನೆಗೆ ಒತ್ತು ನೀಡಬೇಕು. ಆಗ ಮಾತ್ರ ನಿಮ್ಮ ಧ್ವನಿ ಮತ್ತಷ್ಟು ಹೆಚ್ಚುತ್ತದೆ ಎಂದು ಹೊರಟ್ಟಿ ಅವರು ಸಲಹೆ ನೀಡಿದರು.ಗುರುಪೀಠ ಸ್ಥಾಪನೆಗೆ ಚರ್ಚೆ:
ಸಮಾಜದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಪೋವನ ಮುಖ್ಯಸ್ಥರೂ ಆದ ಡಾ.ಶಶಿಕುಮಾರ ಮೆಹರವಾಡೆ ಮಾತನಾಡಿ, ಸಮಾಜದಲ್ಲಿ ಶೇ.10ರಷ್ಟು ಮಾತ್ರ ಆರ್ಥಿಕವಾಗಿ ಸ್ಥಿತಿವಂತರಿದ್ದು, ಶೇ.80 ಜನ ಮಧ್ಯಮ ವರ್ಗ, ಬಡ ವರ್ಗದಲ್ಲಿದ್ದಾರೆ. ಮುಂದಿನ 5 ವರ್ಷದಲ್ಲಿ ಅನೇಕ ಕೆಲಸ ಮಾಡಬೇಕಿದೆ. ಬಡ, ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಸುಧಾರಣೆ, ಶೈಕ್ಷಣಿಕಮಟ್ಟ ಉತ್ತಮಪಡಿಸಲು ವಿಚಾರ ಸಂಕಿರಣ ಆಯೋಜಿಸಲಾಗುವುದು. ಇನ್ನು ಸಮಾಜದ ಗುರುಪೀಠ ಸ್ಥಾಪಿಸುವ ದಶಕಗಳ ಗುರಿ ಇದೆ. ಈ ಸಭೆಯಲ್ಲೂ ಗುರುಪೀಠ ಸ್ಥಾಪನೆ ಬಗ್ಗೆ ಚರ್ಚಿಸಿ, ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ರಾಜ್ಯಸಭೆ ಸದಸ್ಯ ನಾರಾಯಣ ಸಾ ಕೆ.ಭಾಂಡಗೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಎಚ್.ಎಚ್. ಶಿವಶಂಕರ್ ಮಾತನಾಡಿದರು. ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಸಮಾಜದ ಮುಖಂಡರಾದ ಅಶೋಕ ಕಾಟ್ವೆ, ಸತೀಶ ಮೆಹರವಾಡೆ, ಟಿ.ಎಂ. ಮೆಹರವಾಡೆ, ಮಾರುತಿ ಪವಾರ್, ಸ್ವಯಂ ಪ್ರಭಾ, ಮಲ್ಲಾರಸಾ ಆರ್. ಕಾಟವೆ, ಪತ್ರಿಕಾ ಛಾಯಾಗ್ರಾಹಕ ವಿವೇಕ್ ಬದ್ದಿ, ರಾಜು ಬದ್ದಿ ಇತರರು ಇದ್ದರು.
- - -ಬಾಕ್ಸ್ * ಹಿಂದುತ್ವಕ್ಕೆ ಮತ್ತೊಂದು ಹೆಸರೇ ಎಸ್ಎಸ್ಕೆ ಸಮಾಜ ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಹಿಂದುತ್ವ-ರಾಷ್ಟ್ರೀಯತೆಗೆ ಮತ್ತೊಂದು ಹೆಸರಿದ್ದರೆ ಅದು ಸೂರ್ಯವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವೆಂದರೂ ಅತಿಶಯೋಕ್ತಿಯಲ್ಲ. ತಮ್ಮ ತಂದೆ ಕಾಲದಿಂದಲೂ ಎಸ್ಎಸ್ಕೆ ಸಮಾಜದೊಂದಿಗೆ ಉತ್ತಮ ಒಡನಾಟ ಹೊಂದಿದ್ದೇವೆ. ಸಮಾಜದ ಅನೇಕರಿಗೆ ಬಿಜೆಪಿ ರಾಜಕೀಯ ಸ್ಥಾನಮಾನವನ್ನು ಒದಗಿಸಿದೆ. ಎಸ್ಎಸ್ಕೆ ಸಮಾಜದ ಯಾವುದೇ ಕೆಲಸ, ಕಾರ್ಯಗಳನ್ನು ಮೊದಲ ಆದ್ಯತೆ ಮೇಲೆ ಮಾಡುತ್ತಿದ್ದೇವೆ ಎಂದರು.(ಪೋಟೋ: ಜಗದೀಶ ಶೆಟ್ಟರ್)
- - - ಕೋಟ್ಹರೆಯದ ಮಕ್ಕಳನ್ನು ಸಮಾಜ ಸಂಘಟನೆಯ ಕಾರ್ಯಕ್ರಮಗಳಿಗೆ ಕರೆ ತಂದಾಗ ಸಮಾಜದ ಪರ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಯಾವುದೇ ಸಮಾಜದ ಸಮಸ್ಯೆ ಬಗೆಹರಿಸಿಕೊಳ್ಳಲು ಸಂಘಟನೆ ಅಗತ್ಯ. ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಹೀಗೆ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದ ಈ ಸಮಾಜ ಮುಖ್ಯವಾಹಿನಿಗೆ ಬರಬೇಕು. ಸಾಧ್ಯವಾದಷ್ಟೂ ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಿ. ಅಂತಹವರಿಂದ ಸಮಾಜ, ಕುಟುಂಬ ಸುಧಾರಣೆ ಸಾಧ್ಯ- ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್ತು
- - - -29ಕೆಡಿವಿಜಿ2:ದಾವಣಗೆರೆಯಲ್ಲಿ ಭಾನುವಾರ ಎಸ್ಎಸ್ಕೆ ಸಮಾಜದ ರಾಜ್ಯಮಟ್ಟದ 2ನೇ ಸಿಎಂಸಿ ಸಭೆ, ನೂತನ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ವಿಪ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ಇತರರು ಪಾಲ್ಗೊಂಡರು.