ರಂಗ ಗೀತೆಗಳು ನಾಟಕದ ಆತ್ಮ: ಆರ್‌. ಜಗದೀಶ್‌

| Published : Nov 29 2024, 01:01 AM IST

ಸಾರಾಂಶ

ಸಾಹಿತ್ಯದ ಭಾಗವಾಗಿರುವ ರಂಗ ಗೀತೆಗಳು ನಾಟಕದ ಆತ್ಮ ಎಂದು ರಂಗ ತರಬೇತುದಾರ ಹಾಗೂ ಎನ್‍ಎಸ್‍ಡಿ ಪದವೀಧರ ಆರ್. ಜಗದೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಹಿತ್ಯದ ಭಾಗವಾಗಿರುವ ರಂಗ ಗೀತೆಗಳು ನಾಟಕದ ಆತ್ಮ ಎಂದು ರಂಗ ತರಬೇತುದಾರ ಹಾಗೂ ಎನ್‍ಎಸ್‍ಡಿ ಪದವೀಧರ ಆರ್. ಜಗದೀಶ್ ಹೇಳಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ವಿಭಾಗ, ಕಡೆಕೊಪ್ಪಲ ಪ್ರತಿಷ್ಠಾನ, ಸಹ್ಯಾದ್ರಿ ಕಲಾ ತಂಡ ಸಹಯೋಗದಲ್ಲಿ ಗುರುವಾರ ಪುರುಷರ ಹೊಸ ಸ್ನಾತಕೋತ್ತರ ಹಾಸ್ಟಲ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ರಂಗ ಗೀತೆ ಕಲಿಕಾ ಶಿಬಿರದಲ್ಲಿ ಅವರು ಮಾತನಾಡಿದರು.ಸಾಹಿತ್ಯದ ಒಲವು ಎಲ್ಲಾ ವಿದ್ಯಾರ್ಥಿಗಳಲ್ಲೂ ಇರಬೇಕು. ರಂಗ ಗೀತೆಗಳನ್ನು ಕೇಳಿದರಷ್ಟೆ ಸಾಲದು. ಅರ್ಥ ಮಾಡಿಕೊಳ್ಳಬೇಕು. ರಂಗ ಗೀತೆಗಳು ಎಂದಿಗೂ ಮರೆಯಾಗುವುದಿಲ್ಲ. ಅವು ಪಾತ್ರಗಳಿಗೆ ಜೀವ ತಂದುಕೊಡುತ್ತವೆ. ಮಾತು ಹಾಡಾಗುವ ಪರಿಯೇ ರಂಗ ಗೀತೆ ಎಂದರು.ಪ್ರಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಚಾಲಕ ಡಾ. ಲವ ಜಿ.ಆರ್., ರಂಗ ಗೀತೆಗಳು ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚರಿತ್ರೆ ಮತ್ತು ಚಾರಿತ್ರ್ಯದ ಪ್ರತಿಬಿಂಬವೇ ರಂಗ ಗೀತೆಗಳಾಗಿವೆ. ಭಾರತೀಯ ನಾಟಕಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಂಗ ಗೀತೆಗಳು ಸಾಂಸ್ಕೃತಿಕ ವಾತವರಣವನ್ನು ನೀಡುತ್ತವೆ ಎಂದು ಹೇಳಿದರು.

ವಿಕಾರಗಳ ವಿದ್ಯಾಮಾನಗಳ ನಡುವೆ ಹೊಸ ಭರವಸೆಯನ್ನು ರಂಗ ಗೀತೆಗಳು ಮೂಡಿಸುತ್ತವೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಠಿಸಿ ಸಮುದಾಯವನ್ನು ಗ್ರಹಿಸುವಂತೆ ಮಾಡುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಅವಿನಾಶ್ ಮಾತನಾಡಿ, ವೈಯುಕ್ತಿಕ ನೆಲೆಯಿಂದ ಸಮುದಾಯದತ್ತ ಅಲೋಚನೆಗಳನ್ನು ತಲುಪಿಸುವ ಮಾರ್ಗವೇ ರಂಗ ಗೀತೆಗಳಾಗಿವೆ. ರಂಗ ಗೀತೆಗಳು ಪ್ರೇಕ್ಷಕರ ಆಕರ್ಷಣೆಯ ಬಹುಮುಖ್ಯ ಭಾಗವಾಗಿದೆ. ರಂಗ ಗೀತೆಗಳನ್ನು ಜನಪದರು ಉಳಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಜನಪದಕ್ಕೆ ಹಲವರು ಮತ್ತಷ್ಟು ಜೀವ ನೀಡುತ್ತಿದ್ದಾರೆ. ನಮ್ಮ ಕಾಲೇಜು ಕೂಡ ಪಠ್ಯೇತರ ಚಟುವಟಿಕೆಯಾಗಿ ಈ ಮಹತ್ವಕಾಂಕ್ಷೆಯ ಶಿಬಿರವನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.ಕಡೆಕೊಪ್ಪಲು ಪ್ರತಿಷ್ಠಾನದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ್ ಶಿಬಿರ ಉದ್ಘಾಟಿಸಿ ರಂಗ ಗೀತೆ ಹಾಡುವುದರ ಮೂಲಕ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ. ಪ್ರಕಾಶ್ ಮರ್ಗನಳ್ಳಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಶಿವಮೂರ್ತಿ ಇದ್ದರು.ನಗರದ ವಿವಿಧ ಕಾಲೇಜುಗಳಾದ ಎನ್‍ಇಎಸ್, ಎಟಿಎನ್‍ಸಿ, ಸಹ್ಯಾದ್ರಿ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜು, ಪೆಸಿಟ್ ಹಾಗೂ ಸ್ನಾತಕೊತ್ತರ ಕೇಂದ್ರದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿಂಚನ ನಿರೂಪಿಸಿ, ಪವಿತ್ರ ವಂದಿಸಿದರು.