ಸೋಲು ಗೆಲುವಿನ ಮೆಟ್ಟಿಲು : ಎಸ್ಪಿ ರಾಮರಾಜನ್

| Published : Nov 10 2024, 01:52 AM IST / Updated: Nov 10 2024, 01:53 AM IST

ಸಾರಾಂಶ

ಕೊಡಗು ಜಿಲ್ಲಾ ಪೊಲೀಸ್‌ ಲೀಗ್‌ ಪಂದ್ಯವನ್ನು ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ಕೊಡಗು ಪೊಲೀಸ್ ಕ್ರಿಕೆಟ್ ಲೀಗ್ ಪಂದ್ಯವನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಯಿತು.

ಸದಾ ಒತ್ತಡದಲ್ಲಿರುವ ಪೊಲೀಸರು ಜಂಜಾಟ ಮರೆತು, ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಪೊಲೀಸರು ನಿರಂತರ ಕಾರ್ಯಕ್ರಮಗಳಿಂದ ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಈ ಕ್ರಿಕೆಟ್ ಲೀಗ್ ನಿಂದ ಕೊಂಚ ವಿಶ್ರಾಂತಿ ದೊರಕಲಿದೆ. ಪಂದ್ಯದಲ್ಲಿ ಗೆಲ್ಲುವುದು ಮಾತ್ರ ಮುಖ್ಯವಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತರೆ ಮಾತ್ರ ಗೆಲುವು ಸಾಧಿಸಲು ಸ್ಪೂರ್ತಿ ಬರುತ್ತದೆ ಎಂದರು.

ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಕೊಲೆ ಮಾಡಿ ಕೊಡಗಿನಲ್ಲಿ ತಂದು ವ್ಯಕ್ತಿಯೊಬ್ಬರನ್ನು ಸುಟ್ಟು ಹಾಕಿರುವ ಪ್ರಕರಣವನ್ನು ಯಾವುದೇ ಕುರುಹು ಇಲ್ಲದೆ ಪತ್ತೆಹಚ್ಚುವಲ್ಲಿ ಕೊಡಗು ಪೊಲೀಸ್ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಇದಲ್ಲದೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೈಡ್ರೋ ಗಾಂಜಾ, ದರೋಡೆ ಪ್ರಕರಣ ಸೇರಿದಂತೆ ಹಲವು ವಿಶೇಷ ಪ್ರಕರಣಗಳಲ್ಲಿ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾತನಾಡಿ ಕಳೆದ ಕೆಲವು ದಿನಗಳಿಂದ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಅನ್ನು ಅದ್ಭುತವಾಗಿ ಆಯೋಜನೆ ಮಾಡಲಾಗಿದೆ. ಈ ಕ್ರೀಡೆಯಲ್ಲಿ ಆರೋಗ್ಯಕರ ಸಂಘರ್ಷ ಇರಬೇಕು ಎಂದು ಹೇಳಿದರು.

ಮಡಿಕೇರಿ ಡಿವೈಎಸ್ ಪಿ ಮಹೇಶ್ ಮಾತನಾಡಿ, ಪೊಲೀಸರು ಎರಡು ತಿಂಗಳ ಒತ್ತಡ ಅನುಭವಿಸಿದ್ದಾರೆ. ಈ ಕ್ರಿಕೆಟ್ ಪಂದ್ಯದಿಂದ ಅವರಿಗೆ ವಿಶ್ರಾಂತಿಯನ್ನು ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮುಂದೆ ಅದೇ ಜಂಜಾಟ ನಮಗಿದೆ. ಇದು ನಮ್ಮ ಕರ್ತವ್ಯ ಕೂಡ ಹೌದು. ಇದನ್ನು ನಾವು ಇಷ್ಟಪಟ್ಟು ಮಾಡುತ್ತೇವೆ ಎಂದರು.

ಡಿವೈಎಸ್ ಪಿ ರವಿ, ವೃತ್ತ ನಿರೀಕ್ಷಕರಾದ ರಾಜು, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಇದ್ದರು.

ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದ ವಿರಾಜಪೇಟೆ ವಿಎಸ್ ಡಿ ವಿಕ್ಟರಿ ಕಾಪ್ಸ್ ತಂಡ ಕೊಡಗು ಪೊಲೀಸ್ ಕ್ರಿಕೆಟ್ ಲೀಗ್ ನಲ್ಲಿ ವಿನ್ನರ್ಸ್ ಪ್ರಶಸ್ತಿ ಗಳಿಸಿತು. ಐ.ಪಿ. ಮೇದಪ್ಪ ನೇತೃತ್ವದ ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಡಿಪಿಓ ಡೈನಾಮಿಕ್ ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿತು.

ಮಡಿಕೇರಿ ಉಪ ವಿಭಾಗ ತಂಡ ಎಂಎಸ್ ಡಿ ಮಾಸ್ಟರ್ ಕಾಪ್ಸ್, ಸೋಮವಾರಪೇಟೆ ಉಪ ವಿಭಾಗ ತಂಡ ಎಸ್ ಎಸ್ ಡಿ ಸೂಪರ್ ಕಾಪ್ಸ್, ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಆರ್ ತಂಡಗಳು ಲೀಗ್ ಪಂದ್ಯದಲ್ಲಿ ಪಾಲ್ಗೊಂಡಿತ್ತು.

ಕೊಡಗು ಪೊಲೀಸ್ 11 ಹಾಗೂ ಕೊಡಗು ಮೀಡಿಯಾ ವಾರಿಯರ್ಸ್ ತಂಡದ ನಡುವೆ ನಡೆದ ಮೊದಲ ಪ್ರದರ್ಶನ ಪಂದ್ಯದಲ್ಲಿ ಕೊಡಗು ಪೊಲೀಸ್ ತಂಡ ವಿನ್ನರ್ಸ್ ಪ್ರಶಸ್ತಿ ಪಡೆಯಿತು. ಎರಡನೇ ಪ್ರದರ್ಶನ ಪಂದ್ಯದಲ್ಲಿ ಕೊಡಗು ಪ್ರೆಸ್ ರಾಕರ್ಸ್ ತಂಡ ಕೊಡಗು ಪೊಲೀಸ್ ಎ ತಂಡದ ವಿರುದ್ಧ ಜಯ ಸಾಧಿಸಿತು.

ಮ್ಯಾನ್ ಆಫ್ ದಿ ಮ್ಯಾಚ್ : ಅನೀಶ್ (ವಿಎಸ್ ಡಿ ವಿಕ್ಟರಿ), ಬೆಸ್ಟ್ ಬ್ಯಾಟ್ಸ್ ಮನ್ : ಅನೀಶ್(99 ರನ್-ವಿಎಸ್ ಡಿ ವಿಕ್ಟರಿ), ಬೆಸ್ಟ್ ಬೌಲರ್ : ಪ್ರವೀಣ್ (ಡಿಪಿಓ ಡೈನಾಮಿಕ್), ಬೆಸ್ಟ್ ಫೀಲ್ಡರ್ : ಪ್ರವೀಣ್ (ಡಿಪಿಓ ಡೈನಾಮಿಕ್), ಮ್ಯಾನ್ ಆಫ್ ದಿ ಸೀರೀಸ್ : ರಾಜ(ಡಿಪಿಓ ಡೈನಾಮಿಕ್)