ಸಾರಾಂಶ
ಶ್ರೀರಂಗಪಟ್ಟಣ ಸರ್ಕಾರಿ ಜೂನಿಯರ್ ಕಾಲೇಜು ಆವಣದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಮೊದಲಿಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ತಂಡ ಬಿಸಿಯೂಟದ ರಿಜಿಸ್ಟರ್, ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಂದ ಮಧ್ಯಾಹ್ನ ನೀಡುವ ಊಟದ ಬಗ್ಗೆ ವಿವರಣೆ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಅವರು ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವಣದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಮೊದಲಿಗೆ ಭೇಟಿ ನೀಡಿದ ತಂಡ ಬಿಸಿಯೂಟದ ರಿಜಿಸ್ಟರ್, ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಂದ ಮಧ್ಯಾಹ್ನ ನೀಡುವ ಊಟದ ಬಗ್ಗೆ ವಿವರಣೆ ಪಡೆದುಕೊಂಡರು. ನಂತರ ಟಿಎಂಪಿಸಿಎಂಎಸ್ ಆವರಣದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ದಿನ ನಿತ್ಯ ನೀಡುವ ಆಹಾರ ಮೆನು ಬಗ್ಗೆ ಹಾಗೂ ಕುಂದುಕೊರತೆ ವಿಚಾರಿಸಿ ಸಂವಾದ ನಡೆಸಿದರು. ನಂತರ ಸ್ಟಾಕ್ ರಿಜಿಸ್ಟರ್ ಹಾಗೂ ಹಾಜರಾತಿ ದಾಖಲೆಗಳನ್ನು ಪರಿಶೀಲಿಸಿದರು.
ಬಳಿಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಆಯೋಗದ ತಂಡ ಹೊರ ರೋಗಿಗಳ ಸಂಖ್ಯೆ ಕಡಿಮೆ ಇದ್ದುದ್ದರಿಂದ ಒಳ ರೋಗಿಗಳ ಕೊಠಡಿಗೆ ತೆರಳಿ ಹಾಸಿಗೆ ಹಾಗೂ ಮೇಲೊದಿಕೆ, ರೋಗಿಗಳಿಗೆ ನೀಡುವ ಔಷದೋಪಚಾರ, ಊಟ ಹಾಗೂ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಕುದ್ದು ಸ್ಥಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿಕೊಂಡರು.ಕೆಲ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಸಿ.ಸಿ ಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಂಪ್ಯೂಟರ್ ವ್ಯವಸ್ಥೆ ಸರಿಯಾಗಿಲ್ಲ. ಜೊತೆಗೆ ವಸತಿ ನಿಲಯಗಳಲ್ಲಿ ಕಾಂಪೌಂಡ್ ಹಾಗೂ ಸುಸ್ಥಿರವಾದ ಕಟ್ಟಡಗಳಿಲ್ಲದಿರುವ ಬಗ್ಗೆ ಸದಸ್ಯರು ಚರ್ಚಿಸಿ ಸರ್ಕಾರಕ್ಕೆ ವರದಿ ನೀಡುವುದಾಗಿ ತಮ್ಮ ರಿಜಿಸ್ಟರ್ ವಹಿಯಲ್ಲಿ ದಾಖಲಿಸಿಕೊಂಡರು.
ಈ ವೇಳೆ ಆಯೋಗದ ಸದಸ್ಯರಾದ ಸುಮಂತ್ರಾವ್, ರೋಹಿಣಿ ಪ್ರಿಯ, ವಿಜಯಲಕ್ಷ್ಮಿ, ಮಾರುತಿ ದೊಡ್ಡ ಲಿಂಗಣ್ಣನವರ್, ಲಿಂಗರಾಜು, ಆಹಾರ ಇಲಾಖೆ ಕೃಷ್ಣಕುಮಾರ್ ಸೇರಿದಂತೆ ಸ್ಥಳೀಯ ತಹಶೀಲ್ದಾರ್ ಪುರುಶುರಾಮ್ ಸತ್ತಿಗೇರಿ, ಕಂದಾಯ ನಿರೀಕ್ಷಕ ರೇವಣ್ಣ ಸೇರಿದಂತೆ ಇತರರು ಇದ್ದರು.